ಕೋಮುವಾದಿ ಬಿಜೆಪಿಗೆ ಅಧಿಕಾರ ಕೊಡಬೇಡಿ: ಪಾಟೀಲ
ಮೈತ್ರಿ ಅಭ್ಯರ್ಥಿ ಸುನಿತಾ ಬೆಂಬಲಿಸಲು ಮನವಿ
Team Udayavani, Apr 14, 2019, 3:13 PM IST
ಚಡಚಣ: ಜೆಡಿಎಸ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು.
ಚಡಚಣ: ನರೇಂದ್ರ ಮೋದಿಯವರ ಸರಕಾರ ಕೋಮುವಾದಿ, ಮಹಿಳಾ ವಿರೋಧಿ ಸರಕಾರ, ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಕೊಡಬೇಡಿ. ಮೈತ್ರಿ ಪಕ್ಷದ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಅವರಿಗೆ ಮತ ನೀಡಿ ಆರಿಸಿ ತರಬೇಕೆಂದು ಗೃಹ ಸಚಿವ ಎಂ.ಬಿ. ಪಾಟೀಲ ಮನವಿ ಮಾಡಿದರು.
ಪಟ್ಟಣದ ಕೆಇಬಿ ಹತ್ತಿರ ಇರುವ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೆಡಿಎಸ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
2014ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದ್ದರು. ಇದುವರೆಗೂ 15 ಪೈಸೆ ಯಾರ ಖಾತೆಗೂ ಹಾಕಿಲ್ಲ. ಮೋದಿ ಕೇವಲ ಮಾತಿನಿಂದ ಮೋಡಿ
ಮಾಡುವ ಮೋಡಿಗಾರ ಎಂದ ಅವರು, ರಾಜ್ಯ ಸರಕಾರ ರೈತರಿಗಾಗಿ 50 ಸಾವಿರ ಸಹಕಾರಿ ಬ್ಯಾಂಕ್ ಸಾಲ, 2 ಲಕ್ಷದವರೆಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ, ಚಾಲ್ತಿ ಸಾಲ ಇರುವ ರೈತರಿಗೆ 25 ಸಾವಿರದವರೆಗೆ ಸಾಹಾಯಧನ ನೀಡಿದೆ ಎಂದರು.
ರಮೇಶ ಜಿಗಜಿಣಗಿ ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವರಾಗಿದ್ದರು ಚಡಚಣ ಭಾಗದಲ್ಲೆ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. 40 ವರ್ಷ ಅಧಿ ಕಾರದಲ್ಲಿದ್ದರು ಅವರು ಜಿಲ್ಲೆಗೆ ಏನು ಕೆಲಸ ಮಾಡಿಲ್ಲ, ಅವರಿಗೆ ವಯಸ್ಸಾಗಿದೆ, ಅವರ ಮನೆಗೆ ನಾನೇ ರಸ್ತೆ ನಿಮಾರ್ಣ ಮಾಡಿಸಿದ್ದೇನೆ. ಭೂತನಾಳ ಕೆರೆಗೆ ನೀರು ತುಂಬಿಸಿದ್ದೇನೆ, ಅದರ ಬಹುಪಾಲು ನೀರನ್ನು ರಮೇಶ ಜಿಗಜಿಣಗಿಯವರೆ ಉಪಯೋಗಿಸುತ್ತಾರೆ ಎಂದು ಗೇಲಿ ಮಾಡಿದರು.
ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿ ಚೌಕಿದಾರ ಬಂದ ಮೇಲೆ, ಗೋರ್ಕಾಗಳ ಕೆಲಸ ಕಡಿಮೆಯಾಗಿದೆ. ಸಾಲ ಮನ್ನಾಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ರೈತರು ದೆಹಲಿಯಲ್ಲಿ ಅರೆ ಬೆತ್ತಲೆ ಮೆರವಣಿಗೆ ಮಾಡಿ, ಆರು ತಿಂಗಳು ಕುಳಿತರು 1 ರೂ. ಸಾಲ ಮನ್ನಾ ಮಾಡಲಿಲ್ಲ. ಪುಣ್ಯಾತ್ಮ ರಮೇಶ
ಜಿಗಜಿಣಗಿ ಒಂದು ಸಲನಾದರೂ ಪಾರ್ಲಿಮೆಂಟ್ನಲ್ಲಿ ಮಾತನಾಡಿಲ್ಲ, ಮಾತೆತ್ತಿದರೆ ಮೋದಿ ನೋಡಿ ಮತ ಹಾಕಿ ಎನ್ನುವ ಜಿಗಜಿಣಗಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ಬದಲಾವಣೆಗಾಗಿ ಮೈತ್ರಿ ಅಭ್ಯರ್ಥಿ ಡಾ| ಸುನೀತಾ ದೇವಾನಂದ ಚವ್ಹಾಣ ಅವರಿಗೆ ನಿಮ್ಮ ಮತವನ್ನು ನೀಡಿ ಆಶೀರ್ವದಿಸಿ ಎಂದರು.
ಸಹಕಾರ ಸಚಿವ ಬಂಡೆಪ್ಪ ಕಾಶಂಪುರ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕರಾದ ರಾಜು ಆಲಗೂರ, ವಿಠ್ಠಲ ಕಟಕದೊಂಡ ಮಾತನಾಡಿದರು.
ಸಮಾವೇಶದಲ್ಲಿ ನಾಗಠಾಣ ಮತಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ, ಅಭ್ಯರ್ಥಿ ಡಾ| ಸುನೀತಾ ಚವ್ಹಾಣ, ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ, ಮುಖಂಡರಾದ ಬಿ.ಜಿ. ಪಾಟೀಲ ಹಲಸಂಗಿ, ಎಂ.ಆರ್. ಪಾಟೀಲ, ರೇಷ್ಮಾ ಪಡೆಕನೂರ, ಕಾಂತಾ ನಾಯಕ,
ಮಹಾದೇವಿ ಗೋಕಾಕ, ಚಡಚಣ ತಾಲೂಕಾಧ್ಯಕ್ಷ ಸದಾಶಿವ ಜತ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಶಿವು ಭೈರಗೊಂಡ, ಭೀಮಾಶಂಕರ ವಾಳಿಖೀಂಡಿ ಇದ್ದರು.