ಡೆಂಘೀ ಜ್ವರಕ್ಕೆ ಸಿಕ್ತಿಲ್ಲ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ
Team Udayavani, Sep 22, 2019, 5:51 PM IST
ಯಾದಗಿರಿ: ಡೆಂಘೀ ಜ್ವರದಿಂದ ಬಳಲುತ್ತಿದ್ದ ರೋಗಿಯೊಬ್ಬ ಜಿಲ್ಲಾ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದ ಕುರಿತು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಎದುರು ಗೋಳು ತೋಡಿಕೊಂಡಿದ್ದರಿಂದ, ಸಚಿವರು ಸಿಡಿಮಿಡಿಗೊಂಡರು.
ನಗರದ ಎನ್ವಿಎಂನಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾಹನದಲ್ಲಿ ಪ್ರಯಾಣ ಬೆಳೆಸಿದ ಸಚಿವರು, ನೇರವಾಗಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಅಲ್ಲಿಯೇ ಇದ್ದ ನಗರದ ನಿವಾಸಿ ಬಂದಪ್ಪ ಎನ್ನುವಾತ ಕಳೆದ ಒಂದು ವಾರದಿಂದ ಜಿಲ್ಲಾಸ್ಪತ್ರೆಗೆ ಅಲೆಯುತ್ತಿದ್ದು, ಬಳಿಕ ರಕ್ತ ಪರೀಕ್ಷಿಸಿದಾಗ ಡೆಂಘೀ ಇರುವುದು ಖಚಿತವಾಗಿದೆ. ಆದರೆ ಸೂಕ್ತ ಚಿಕಿತ್ಸೆ ಮಾತ್ರ ನೀಡಲಾಗುತ್ತಿಲ್ಲ ಎಂದು ಸಚಿವರೆದು ಅಳಲು ತೋಡಿಕೊಂಡ. ಸಚಿವರು ತಕ್ಷಣವೇ ಸ್ಥಳದಲ್ಲಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ಆದೇಶಿಸಿದರು.
ಆಸ್ಪತ್ರೆಗೆ ವೈದ್ಯರು ಸಕಾಲಕ್ಕೆ ಬರುವುದಿಲ್ಲ. ಬಹುತೇಕ ವೈದ್ಯರು ಖಾಸಗಿ ಆಸ್ಪತ್ರೆ ತೆರೆದುಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮನಸ್ಸಿಗೆ ಬಂದಾಗ ಬರುತ್ತಾರೆ ಎಂದು ನೆರೆದ ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ತಕ್ಷಣವೇ ಸಚಿವರು ಆಸ್ಪತ್ರೆ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. ಡಾ| ಸುನೀಲ ಎನ್ನುವರು ಅನೇಕ ದಿನಗಳಿಂದ ಸೇವೆಗೆ ಗೈರು ಆಗಿದ್ದನ್ನು ಪರಿಶೀಲಿಸಿದರು.
ಕೆಲವರು ಮಧ್ಯಾಹ್ನದ ಹಾಜರಿಗೆ ಬೆಳಗ್ಗೆಯೇ ಸಹಿ ಮಾಡಿದ್ದರು. ಇದನ್ನು ಗಮನಿಸಿ ಆಡಳಿತ ವೈದ್ಯಾಧಿಕಾರಿ ಡಾ| ನಾರಾಯಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಆಸ್ಪತ್ರೆ ಆವರಣ ವೀಕ್ಷಿಸಿದ ಸಚಿವರು, ತೆರೆದ ಸ್ಥಳದಲ್ಲಿ ಅವ ಧಿ ಮೀರಿರುವ ಔಷಧಿಗಳನ್ನು ಬೇಕಾಬಿಟ್ಟಿ ಬಿಸಾಡಿರುವುದನ್ನು ಪರಿಶೀಲಿಸಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಆಡಳಿತ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಹೊರ ರೋಗಿಗಳ ವಿಭಾಗ, ನವಜಾತ ಶಿಶುಗಳ ವಿಭಾಗಕ್ಕೆ ಭೇಟಿ ನೀಡಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದ ಜನರನ್ನು ಮಾತನಾಡಿಸಿ, ವ್ಯವಸ್ಥೆ ಕುರಿತು ಮಾಹಿತಿ ಪಡೆದರು.
ನಂತರ ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ, ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿದರು. ಒಬ್ಬೊಬ್ಬರಾಗಿ ಸಿಬ್ಬಂದಿ ಹೆಸರನ್ನು ಕೂಗಿ ಅವರು ಕೆಲಸಕ್ಕೆ ಬಂದಿದ್ದಾರೋ ಇಲ್ಲವೋ ಎನ್ನುವುದನ್ನು ಖಾತ್ರಿ ಪಡಿಸಿಕೊಂಡರು. ನಗರಸಭೆ ಎಇ ಶಿವರಾಜ ಕಳೆದ ಕೆಲದಿನಗಳಿಂದ ಗೈರು ಆಗಿರುವುದರಿಂದ ಅಮಾನತಿಗೆ ಶಿಫಾರಸು ಮಾಡುವಂತೆ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಅವರಿಗೆ ಸೂಚಿಸಿದರು.
ನಗರ ಸ್ವಚ್ಛವಾಗಿಡಿ: ನಗರ ಸ್ವತ್ಛವಾಗಿಡಿ. ಎಲ್ಲಿ ನೋಡಿದರೂ ಕೊಳಚೆಯೇ ಕಂಡು ಬರುತ್ತಿದೆ. ಇನ್ನು ಮುಂದೆ ಹೀಗೆಲ್ಲ ನಡೆಯಲ್ಲ ಎಂದು ನಗರಸಭೆ ಪೌರಾಯುಕ್ತರಿಗೆ ಖಡಕ್ ಎಚ್ಚರಿಕೆ ನೀಡಿದರು. ನಗರದಲ್ಲಿ ಶುದ್ಧ ಕುಡಿಯುವ ನೀರು, ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಸಚಿವರು ಸೂಚಿಸಿದರು.
ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಭಗವಂತ ಅನವಾರ ಹಾಗೂ ಇನ್ನಿತರರು ಈ ಸಂದರ್ಭದಲ್ಲಿದ್ದರು.