ಬೇಕರಿ-ಹೋಟೆಲ್ ತಿನಿಸು ಎಷ್ಟು ಸುರಕ್ಷಿತ?
Team Udayavani, Dec 12, 2019, 1:17 PM IST
ಅನೀಲ ಬಸೂದೆ
ಯಾದಗಿರಿ: ಜಿಲ್ಲೆಯ ಬೇಕರಿ, ಹೋಟೆಲ್, ರಸ್ತೆ ಬದಿ ಮಳಿಗೆಯಲ್ಲಿ ಮಾರಾಟ ಮಾಡಲಾಗುವ ತಿನಿಸುಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಸಾಕಷ್ಟು ಸಂಖ್ಯೆಯಲ್ಲಿ ಹೋಟೆಲ್ ಗಳು, ಬೀದಿ ಬದಿ ತಿನಿಸು ಮಳಿಗೆಗಳಿಗಳು, ಬೇಕರಿಗಳಿವೆ. ಆದರೆ, ಆಹಾರ ಸುರಕ್ಷಣಾ ಮತ್ತು ಗುಣಮಟ್ಟ ಪ್ರಾಧಿಕಾರದಿಂದ 2016ರಿಂದ ಈವರೆಗೆ 420 ಆಹಾರ ತಯಾರಕರು, ಮಾರಾಟಗಾರರು ಪರವಾನಿಗೆ ಪಡೆದಿದ್ದಾರೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ನಿಯಮ ಹಾಗೂ ಕಾಯ್ದೆ ಪ್ರಕಾರ ಆಹಾರ ತಯಾಕರು, ಸಂಗ್ರಹಕಾಕರು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ. ಅಲ್ಲದೇ ಬೀದಿ ಬದಿ ವ್ಯಾಪಾರ ನಡೆಸುವ ತಿನಿಸು ಮಾರಾಟಗಾರರು ಸಹ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಜಿಲ್ಲೆಯಲ್ಲಿ ನಿಯಮವನ್ನೇ ಗಾಳಿಗೆ ತೂರಿ ಅದೆಷ್ಟೋ ಬೇಕರಿ, ಹೋಟೆಲ್ಗಳು ನಡೆಯುತ್ತಿವೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅಧಿಕಾರಿಗಳು ಅದರತ್ತ ತಿರುಗಿ ನೋಡಿದ್ದಾರೆಯೇ? ಆಹಾರ ಸುರಕ್ಷತೆ ಕುರಿತು ಜನರಲ್ಲಿ ಸಮರ್ಪಕ ಜಾಗೃತಿ ಮೂಡಿಸಬೇಕಿದ್ದ ಆಹಾರ ಸುರಕ್ಷತಾ ಪ್ರಾಧಿಕಾರ ತನ್ನ ಕರ್ತವ್ಯ ಮರೆತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಜಿಲ್ಲಾ ಕೇಂದ್ರದಲ್ಲಿರುವ ಕೆಲ ಪ್ರಸಿದ್ಧ ಹೋಟೆಲ್ಗಳು ಪರವಾನಿಗೆ ಪಡೆದಿವೆ. ಆದರೂ ಬಡ ಮತ್ತು ಮಧ್ಯಮ ವರ್ಗದ ಜನರು ಪ್ರತಿಷ್ಠಿತ ಹೋಟೆಲ್ಗಳಿಗೆ ತೆರಳುವುದು ಕಷ್ಟ. ಹಾಗಾಗಿ ರಸ್ತೆ ಬದಿಯಲ್ಲಿನ ಮಳಿಗೆಗಳಲ್ಲಿ ತೆರೆದ ಸಣ್ಣ ಪುಟ್ಟ ಹೋಟೆಲ್ ಗಳನ್ನೇ ಅವಲಂಭಿಸುತ್ತಾರೆ. ಪ್ರಮುಖವಾಗಿ ಆಹಾರ ಸುರಕ್ಷತಾ ಪರವಾನಿಗೆ ಪಡೆದ ಹೋಟೆಲ್ಗಳೂ ಆಹಾರ ಪೂರೈಸುವ ಕೈ ಮತ್ತು ತಲೆಗೆ ಸುರಕ್ಷತಾ ಕವಚ ಧರಿಸಿರಬೇಕು ಎನ್ನುವ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ.
ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡಲು ಇರುವ ಪ್ರಾಧಿಕಾರ ಸಾರ್ವಜನಿಕರ ಆರೋಗ್ಯ ಕಾಪಾಡುವ ಪ್ರಮುಖ ಜವಾಬ್ದಾರಿ ಹೊಂದಿದೆ. ಆದರೆ ಜಿಲ್ಲೆಯಲ್ಲಿ ಪ್ರಾಧಿಕಾರ ನಾಮಕೇ ವಾಸ್ತೆ ಇದೆಯೇ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು 2013ರಿಂದ ಈ ವರೆಗೆ ಹಲವೆಡೆ ಪರಿಶೀಲಿಸಿ ನ್ಯಾಯ ನಿರ್ಣಯ ಅಧಿಕಾರಿಗಳಿಗೆ ಪ್ರಕರಣಗಳ ವರದಿ ನೀಡಿದ್ದಾರೆ. ಅಪರ ಜಿಲ್ಲಾಧಿಕಾರಿ ಪ್ರಕರಣಗಳ ವಿಚಾರಣೆ ನಡೆಸುತ್ತಾರೆ. ಆಹಾರ ಸುರಕ್ಷತೆ ನಿಯಮ ಉಲ್ಲಂಘಿಸಿದದವರ ವಿರುದ್ಧ 51 ಪ್ರಕರಣ ದಾಖಲಿಸಿದ್ದು, ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ 7 ಪ್ರಕರಣಗಳು ಜೆಎಂಎಫ್ಸಿ ನ್ಯಾಯಾಲಯದಲ್ಲಿವೆ.
ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗುವುದು. ಆಹಾರ ಸುರಕ್ಷತೆ ಅಂಶಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ದಾಖಲಾದ ಪ್ರಕರಣಗಳಲ್ಲಿ 13 ಪ್ರಕರಣಗಳು ವಿಲೇವಾರಿಯಾಗಿ 1.30 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರಾಧಿಕಾರದಲ್ಲಿ ವಿಚಾರಣೆಗೆ ಉಳಿದ 31 ಪ್ರಕರಣಗಳನ್ನು ವಿಚಾರಣೆಗೆ ಎತ್ತಿಕೊಂಡು ದಂಡ ವಿಧಿಸಲಾಗುವುದು. ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
.ಪ್ರಕಾಶ ರಜಪೂತ,
ಅಪರ ಜಿಲ್ಲಾಧಿಕಾರಿ ಯಾದಗಿರಿ