ಮೂಲ ಸೌಕರ್ಯ ಒದಗಿಸಲು ಒತ್ತಾಯ
ಸ್ಲಂ ನಿವಾಸಿಗಳಿಗೆ ಮಕ್ಕಳಿಗೆ ಅಂಗನವಾಡಿ ಕೇಂದ್ರ ಆರಂಭಿಸಲು ಆಗ್ರಹ
Team Udayavani, Jul 17, 2019, 1:15 PM IST
ಯಾದಗಿರಿ: ಇಲ್ಲಿನ ಮದನಪುರ ಸ್ಲಂ ನಿವಾಸಿಗಳ ಪ್ರದೇಶದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಮಾತನಾಡಿದರು
ಯಾದಗಿರಿ: ಜಿಲ್ಲಾಡಳಿತ ನಗರದ ಸ್ಲಂ ಪ್ರದೇಶದ ಜನರಿಗೆ ಒಂದು ವೈಯಕ್ತಿಕ ಇರಲಿ, ಸಾಮೂಹಿಕ ಶೌಚಾಲಯ ಕೂಡ ನಿರ್ಮಿಸದೇ ಅನ್ಯಾಯ ಮಾಡಿದೆ ಎಂದು ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಕೆ. ಮುದ್ನಾಳ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಮದನಪುರ ಸ್ಲಂ ನಿವಾಸಿಗಳ ಪ್ರದೇಶದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗೆ ಹೈಟೆಕ್ ಶೌಚಾಲಯ ಯಾವುದೇ ಅನುಮೋದನೆ ಇಲ್ಲದೇ ನಿರ್ಮಿಸಿದರು. ಆದರೆ ಯಾದಗಿರಿ ಆರಂಭದಿಂದಲೂ ಇರುವ ಸ್ಲಂ ನಿವಾಸಿಗಳಿಗೆ ಇದುವರೆಗೆ ಒಂದು ಶೌಚಾಲಯ ಇಲ್ಲ, ಮಕ್ಕಳಿಗೆ ಅಂಗನವಾಡಿ ಕೇಂದ್ರವೂ ಇಲ್ಲ ಎಂದು ದೂರಿದರು.
ಹಂದಿಗಳು ಸಹ ದೇವಸ್ಥಾನದಲ್ಲಿ ಓಡಾಡಿಕೊಂಡಿರುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಇದಕ್ಕೆ ಕಾಂಪೌಂಡ್ ಇಲ್ಲ. ಇದುವರೆಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲದಿರುವುದು ನಾಚಿಕೆಗೇಡು ಸಂಗತಿಯಾಗಿದೆ ಎಂದರು.
ಸ್ಲಂ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಇಲ್ಲ. ಕನಿಷ್ಟ ಒಂದು ನೀರಿನ ಓವರ್ ಟ್ಯಾಂಕ್ ನಿರ್ಮಿಸಬೇಕು. ಕೈ ಪಂಪ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಸ್ಲಂ ಪ್ರದೇಶದವರಿಗಾಗಿ ಅಂಗನವಾಡಿ ಕೇಂದ್ರ ತೆರೆದು ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಇಲ್ಲಿನ ಜನ ಮಕ್ಕಳನ್ನು ರಸ್ತೆಯಲ್ಲಿಯೇ ಬಿಟ್ಟು ಹೋಗುವಂತ ಪರಿಸ್ಥಿತಿ ಇದ್ದು, ತಕ್ಷಣ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ವಾಮಿನಾಥನ್ ಅಪ್ಪುಕುಟನ್, ಮಹಮ್ಮದ್ ಗಫೂರ, ಆನಂದ, ರಾಜಮಹಮ್ಮದ್, ಮಹೆಬೂಬ, ಸುರೇಶ, ಶಿವು, ಬಸವರಾಜ, ಈಶಪ್ಪ, ಅಕ್ಬರ, ರುದ್ರಯ್ಯ ಸ್ವಾಮಿ, ಹಂಪಮ್ಮ, ಲಕ್ಷ್ಮೀ, ಚಾಂದಬಿ, ದೊರಾಬಿ, ತಿಮ್ಮವ್ವ, ಮಲ್ಲಮ್ಮ, ಗೌರಮ್ಮ, ಗಂಗಮ್ಮ, ಮಹಾದೇವಿ, ಪಾರ್ವತಿ, ವಿಜಯಲಕ್ಷಿ, ಚಂದ್ರಮ್ಮ, ಪದ್ಮ, ಗೌರಮ್ಮ, ಶರಣಮ್ಮ, ಮರೆಮ್ಮ, ಚಂದಮ್ಮ, ದೇವಮ್ಮ, ತಾಯಮ್ಮ, ಪಾರ್ವತಿ, ರಾಜಾಬೇಗಂ, ಲಲಿತಮ್ಮ ಇದ್ದರು.