ತಾಯಿ ಭಾಷೆಯಲ್ಲಿ ವ್ಯವಹರಿಸಿ-ಋಣ ತೀರಿಸಿ: ಸ್ವಾಮೀಜಿ
Team Udayavani, Nov 10, 2019, 5:33 PM IST
ಯಾದಗಿರಿ: ಕನ್ನಡ ಭಾಷೆ ತಾಯಿ ಭಾಷೆ. ಈ ಭಾಷೆಯ ಪ್ರೇಮವನ್ನು ನಾಡಿನಲ್ಲಿ ಬದುಕುವ ಪ್ರತಿಯೊಬ್ಬರು ಕನ್ನಡ ಭಾಷೆ ಮಾತನಾಡುವ ಮೂಲಕ ತಾಯಿ ಋಣ ತೀರಿಸಬೇಕೆಂದು ಹೆಡಗಿಮುದ್ರಾ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.
ನಗರದ ಚರ್ಚ್ ಹಾಲ್ನಲ್ಲಿ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಗಡಿ ಪ್ರದೇಶದಲ್ಲಿರುವ ನೆರೆ ರಾಜ್ಯಗಳ ಭಾಷೆ ರಾಜ್ಯದಲ್ಲಿ ಹೇರಿಕೆ ಮಾಡಲಾಗುತ್ತಿದೆ. ಇದಕ್ಕೆ ಕನ್ನಡಿಗರಾದವರು ಆಸ್ಪದ ಕೊಡದೇ ಕನ್ನಡ ನಾಡು-ನುಡಿ, ನೆಲ-ಜಲ ರಕ್ಷಣೆಗೆ ಪಣ ತೊಡಬೇಕು. ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ಬರೆದಂತೆ ದೇಶಕ್ಕೆ ಒಂದೇ ಧ್ವಜ; ನಾಡಿಗೆ ಹಲವು ಧ್ವಜಗಳಿವೆ. ಇವುಗಳನ್ನು ನಮ್ಮ ಒಗ್ಗಟ್ಟಿಗಾಗಿ ಬಳಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಸೃಷ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೀರೇಶ ಚಿರತೆನೋರ್ ಅಧ್ಯಕ್ಷತೆವಹಿಸಿ ಮಾತನಾಡಿ, ಅನ್ಯ ಭಾಷೆಗಳನ್ನು ಮಾತನಾಡುವುದರಿಂದ ತಾಯಿ ಭಾಷೆ, ಕನ್ನಡದ ಕೊಲೆ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಅರಿಯಬೇಕು. ಕನ್ನಡ ಜಾಗೃತಿ ಮೂಡಿಸುವ ಸಲುವಾಗಿ 111 ಅಡಿ ಕನ್ನಡ ಬಾವುಟ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ಡಿಡಿಯು ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಣ್ಣ ಮೇಟಿ, ನಗರಸಭೆ ಸದಸ್ಯ ಚೆನ್ನಕೇಶವಗೌಡ ಬಾಣತಿಹಾಳ, ಮಾಣಿಕರೆಡ್ಡಿ ಕುರಕುಂದಿ, ಸುಭಾಷರೆಡ್ಡಿ ನಾಯ್ಕಲ್, ಗಿರಿಮಲ್ಲಪ್ಪ, ನಾಗರೆಡ್ಡಿ ಕಣೇಕಲ್, ಚುಸಾಪ ಜಿಲ್ಲಾಧ್ಯಕ್ಷ ಡಾ| ಸಿದ್ದರಾಜರೆಡ್ಡಿ, ಮಲ್ಲಿಕಾರ್ಜುನ ಕೊತ್ತೆ, ಶಿವಕುಮಾರ ಬೆಂಕಿ, ಮಾಳಿಂಗರಾಯ ಹೊರಟೂರ, ಸೈದಪ್ಪ ಕಣಜಿಕರ್, ಮರೆಪ್ಪ, ನಿತೇಶ್, ಅರುಣ, ಮಲ್ಲು ಇದ್ದರು.