ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಅಗತ್ಯ: ಮಲ್ಲಿಕಾರ್ಜುನ
Team Udayavani, Jan 29, 2022, 1:25 PM IST
ಶಹಾಪುರ: ಮಕ್ಕಳಲ್ಲಿ ವಿವಿಧ ರೀತಿಯ ಅಗಾಧ ಪ್ರತಿಭೆ ಇದೆ. ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಪ್ರತಿಭೆ ಹೊರ ಸೂಸುವ ಕೆಲಸ ಮಾಡಬೇಕಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ವಗ್ಗರ್ ತಿಳಿಸಿದರು.
ತಾಲೂಕಿನ ಕಾಡಂಗೇರಾ(ಬಿ) ಗ್ರಾಮದ ಕೃಷ್ಣಾ ಶಾಲೆಯಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅದ್ಭುತ ಬಾಲ ಪ್ರತಿಭೆಗಳಿದ್ದಾರೆ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಕಾರ್ಯ ಯೋಜನೆಗಳನ್ನು ರೂಪಿಸುವ ಮೂಲಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕಿದೆ ಎಂದರು.
ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಿಯಾಜ್ ಪಟೇಲ್ ಮಾತನಾಡಿ, ಮಕ್ಕಳಲ್ಲಿ ಮಾನವೀಯ ಮೌಲ್ಯ ಮರೆಯಾಗುತ್ತಿದೆ. ಹೀಗಾಗಿ ಶಿಕ್ಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯ, ಉತ್ತಮ ಸಂಸ್ಕಾರ ನೀಡುವ ಮೂಲಕ ಸಾಧಕರನ್ನಾಗಿ ಸುಸಂಸ್ಕೃತರನ್ನಾಗಿ ರೂಪಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಮುಖ್ಯಸ್ಥ ಮಾಳಪ್ಪ ಯಾದವ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ನಾಗಪ್ಪ ವಿಠ್ಠಲ್, ಮಾಜಿ ಸದಸ್ಯ ದೇವಿಂದ್ರ ಬಂಗಾರಿ, ಪಶು ಆಸ್ಪತ್ರೆ ವೈದ್ಯ ಶರಣಪ್ಪ ಪಾಟೀಲ, ಸಿದ್ದು ಸಜ್ಜನ್, ವೆಂಕೋಬ ಇದ್ದರು. ಶಿಕ್ಷಕರಾದ ಸಿಂಧೂ ಬಿ. ಪಾಟೀಲ್ ಪ್ರಾರ್ಥಿಸಿದರು. ರೇಣುಕಾ ಕ್ಯಾತನಾಳ ನಿರೂಪಿಸಿದರು. ದುಗೇìಶ ಯಾದವ್ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.