ಕುಷ್ಠರೋಗಿಗಳ ಕಾಲೋನಿಯಲ್ಲಿ ಮನೆ ನಿರ್ಮಾಣದ ಭರವಸೆ ನೀಡಿದ ಸಚಿವರು
ಕುಷ್ಠರೋಗಿಗಳಿಗೆ ಸಲಕರಣೆ ವಿತರಿಸಿದ ಸಚಿವ ಚವ್ಹಾಣ
Team Udayavani, Mar 7, 2021, 5:32 PM IST
ಯಾದಗಿರಿ: ಕುಷ್ಠರೋಗಿ ಕಾಲೋನಿಯ ನಿವಾಸಿಗಳಿಗೆ ಮನೆಗಳು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಪಶುಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಸೂಚಿಸಿದರು.
ನಗರದ ಹೊರವಲಯದಲ್ಲಿರುವ ಕುಷ್ಠರೋಗಿ ನಿವಾಸಿಗಳ ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ಜನರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಸಚಿವರು, ಕಾಲೋನಿಯಲ್ಲಿ 52 ಮನೆಗಳಿದ್ದು, ಬಹುತೇಕ ಮನೆಗಳ ಮೇಲ್ಚಾವಣಿ ಅಲ್ಲಲ್ಲಿ ಉದುರಿ ಬೀಳುತ್ತಿದೆ. ಹಾಗಾಗಿ ಮನೆ ನಿರ್ಮಿಸಬೇಕು. ಜೊತೆಗೆ ಕಾಂಪೌಂಡ್, ರಸ್ತೆ ನಿರ್ಮಾಣ ಮಾಡಬೇಕು, ಕುಡಿಯಲು ಸಮರ್ಪಕ ನೀರು ಪೂರೈಸಬೇಕು ಎಂದು ನಿವಾಸಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕುಡಿಯುವ ನೀರನ್ನು ಕೂಡಲೇ ಪೂರೈಸಲು ಕ್ರಮ ಕೈಗೊಳ್ಳಬೇಕು. ರಸ್ತೆ, ಕಾಂಪೌಂಡ್ ನಿರ್ಮಾಣ ಬೇಗ ಮುಗಿಸಬೇಕು ಎಂದು ಸಂಬಂಧಪಟ್ಟ ಅ ಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ರೋಗಿಗಳಿಗೆ ಊರುಗೋಲು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಪಾದರಕ್ಷೆ ವಿತರಿಸಿದರು. ಈ ವೇಳೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಜಿಪಂ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪೂರ, ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್, ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ.ಆರ್, ಜಿಪಂ ಸಿಇಒ ಶಿಲ್ಪಾ ಶರ್ಮಾ, ಅಪರ ಜಿಲ್ಲಾ ಧಿಕಾರಿ ಪ್ರಕಾಶ್ ಜಿ. ರಜಪೂತ್, ಸಹಾಯಕ ಆಯುಕ್ತ ಶಂಕರ್ ಗೌಡ ಸೋಮನಾಳ, ನಗರಸಭೆ ಆಯುಕ್ತ ಭೀಮಣ್ಣ ಬಿನಾಯಕ್, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಬಕ್ಕಪ್ಪ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.