ಸೋದೆ ಮಠದಿಂದ ಕುಂಬ್ರಿ ದತ್ತು
ಕುಳಿತುಕೊಳ್ಳಲೂ ಜಾಗವಿಲ್ಲದಂತಾಗಿದೆ ಕುಂಬ್ರಿ ಕುಣಬಿಗಳ ಬದುಕು
Team Udayavani, Aug 22, 2019, 3:48 PM IST
ಯಲ್ಲಾಪುರ: ಸೋಮನಳ್ಳಿ ಕುಂಬ್ರಿಯಲ್ಲಿ ಮಹಾಮಳೆಗೆ ಕುಣಬಿಗಳ ಮನೆ ನೆಲಸಮಗೊಂಡಿದೆ.
ನರಸಿಂಹ ಸಾತೊಡ್ಡಿ
ಯಲ್ಲಾಪುರ: ನೆರೆಯ ನೀರು ಹೀಗೆ ಬಂದು ನಮ್ಮ ಬದುಕಿಗೆ ಅಪ್ಪಳಿಸುತ್ತದೆ. ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದು ಮಂಚಿಕೇರಿ ಸಮೀಪದ ಸೋಮನಳ್ಳಿಯ ಕುಂಬ್ರಿ ಕುಣಬಿಗಳು ಮಡುಗಟ್ಟಿದ ದುಃಖವನ್ನು ತೋಡಿಕೊಂಡ ಪರಿ.
ಅಜ್ಜನ ಕಾಲದ ಜಮೀನು ಸಾಗುವಳಿ ಮಾಡಿ ಈಗ ಅಡಕೆ ತೋಟಗಳನ್ನೂ ಮಾಡಲಾಗಿತ್ತು. ಮನೆ ಮಾಡಿಕೊಂಡಿದ್ದೆವು.ದನಕರು ಸಾಕಿದ್ದೆವು. ಬದುಕಿನಲಿ ನಮಗೆ ಒಂದು ರೀತಿಯ ಸಂತಸವಾಗಿತ್ತು. ಆದರೆ ನೆರೆ ಹೇಗೆ ಬಂತೋ ಏನೋ ಒಂದೂ ತಿಳಿಯದು ಎಂದು ಬಿಕ್ಕಳಿಸಿದರು.
ಈ ಕುಂಬ್ರಿಯ ಕುಣಿಬಿಗರ ಆರು ಮನೆಗಳು ಜಲಾವೃತಗೊಂಡು ನೆಲಸಮವಾಗಿದೆ. ತೋಟಗಳು ವಾರಕಾಲ ಜಲಾವೃತವಾದರೆ ನಾಟಿ ಮಾಡದ ಗದ್ದೆ ಕೊಚ್ಚಿಹೋಗಿದೆ. ಗದ್ದೆಯಲ್ಲಿ ಈಗ ನಾಲ್ಕೈದು ಅಡಿ ರೇವು ಮಣ್ಣು ತುಂಬಿದೆ. ತಾವಾಯ್ತು ತಮ್ಮದಾಯ್ತು ಅಂದುಕೊಂಡಿದ್ದವರಿಗೆ ಇದ್ದಕ್ಕಿದ್ದಂತೆ ಬಂದ ನೆರೆ ಬದುಕನ್ನೇ ಅಕ್ಷರಶಃ ಕೊಚ್ಚಿಕೊಂಡು ಹೋಗಿದೆ.
ಹೇಳಿಕೇಳಿ ಬೇಡ್ತಿ ನದಿ ಈ ಕುಂಬ್ರಿಯಿಂದ ಕಿಮೀ ದೂರದಲ್ಲಿದೆ. ಆದರೆ ಅದ್ಹೇಗೋ ಸುನಾಮಿ ಬಂದ ಹಾಗೇ ಬಂತೋ ಏನೋ? ಅತ್ಯಂತ ನಯವಾದ ಮಣ್ಣಿನ ನೆಲ ಹಂಚಿನ ಮೇಲೆ ಸೆಕೆಯಾಗಬಾರದೆಂದು ಹುಲ್ಲಿನ ಹೊದಿಕೆ ಹೊದೆಸಿ ಅವರದ್ದೇ ಆದ ರೀತಿಯಲ್ಲಿ ಮನೆಯ ಸೊಬಗನ್ನು ನಿರ್ಮಿಸಿಕೊಂಡಿದ್ದರು. ಮನೆ ಹೇಗಿತ್ತು ಎಂಬುದನ್ನು ಚಿತ್ತದಲ್ಲಿಯಷ್ಟೇ ನೋಡಬೇಕು.
ಮಹಾಲಕ್ಷ್ಮೀ ಅರ್ಜುನ ಕುಣಬಿ ಇವಳ ಒಂದು ಎಕರೆ ತೋಟ ಜಲಾವೃತಗೊಂಡಿದ್ದು ಏಳು ಎಕರೆ ಗದ್ದೆಗಳಲ್ಲಿ ನಾಟಿ ಮಾಡಿದ ಎರಡು ಎಕರೆ ಕೊಚ್ಚಿಹೋಗಿದೆ. ಉಳಿದ ಗದ್ದೆ ಈಗ ನಾಟಿ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಪುರುಷಾ ಕುಣಬಿ, ಗೋಪಾಲ ಕುಣಬಿ, ಕೇಶವ ಕುಣಬಿ, ನಾಗೇಶ ಕುಣಬಿ, ಶಿವಾ ಕುಣಬಿ ಇವರ ಮನೆಗಳು, ತೋಟ, ಗದ್ದೆ ಹಾನಿಯಾಗಿದ್ದು ಇನ್ನೊಂದು ಮನೆ ಮಾತ್ರ ಉಳಿದುಕೊಂಡಿದೆ.
ಇವರುಗಳ ಮನೆಯಲ್ಲಿ ಏನಿತ್ತು ಏನಿಲ್ಲ. ಎಲ್ಲವೂ ನೀರುಮಯ. ಈಗ ಗುಡ್ಡದಲ್ಲಿ ಪಂಚಾಯತ ನೀಡಿದ ತಗಡಿನ ಶೆಡ್ ಹಾಕಿಕೊಂಡು ಮಕ್ಕಳು ವೃದ್ಧರೊಂದಿಗೆ ಸೊಳ್ಳೆ ಕಾಟ ಸಹಿಸಿಕೊಂಡು ಮನೆಯಾಗುವವರೆಗೆ ಬದುಕು ನಡೆಸಬೇಕು. ಗದ್ದೆಯಿಂದ, ತೋಟದಿಂದ ಬರಬಹುದಾದ ಉತ್ಪನ್ನಗಳು ಹೋಯಿತು. ಜೀವನಕ್ಕಿನ್ನೇನು ಎಂಬುದು ಪ್ರಶ್ನೆಯಾಗಿದೆ. ನೆರೆ ಕಲ್ಪನೆಯೂ ಇಲ್ಲ ಇಂತಹ ನೀರು ನೋಡಿಯೇ ಇರಲಿಲ್ಲ. ಹೊಳೆ ನೋಡಿದರೆ ಕಿ.ಮೀ ದೂರವಿದೆ. ನಮ್ಮ ಬಲಿ ತೆಗೆದುಕೊಳ್ಳಬೇಕಿತ್ತೆ? ಎಂದು ಪ್ರಶ್ನಿಸುತ್ತಾರೆ. ಇವರ ಕಷ್ಟ ನೋಡಲು ಎಲ್ಲಿಯವರೋ ಬಂದು ಹೋಗುತ್ತಿದ್ದಾರೆ. ಸಾಧ್ಯವಾದದ್ದನ್ನು ನೀಡಿ ಹೋಗುತ್ತಿದ್ದಾರೆ. ದೇಹಿ ಅನ್ನುವ ಮನಸ್ಥಿತಿಯವರು ಈ ಕುಣಬಿ ಜನಾಂಗದವರಲ್ಲ. ತಮಗೆ ಎಷ್ಟು ಬೇಕೋ ಅಷ್ಟನ್ನು ಮತ್ತು ಬೇಕಾಗಿರುವುದನ್ನು ಮಾತ್ರ ದಾನಿಗಳಿಂದ ಪಡೆದಿದ್ದಾರೆ. ಸರಿಯಾದ ಜಾಗ, ಬೆಚ್ಚಗಿನ ವ್ಯವಸ್ಥೆಯಿಲ್ಲದ ಕಾರಣ ಮಕ್ಕಳು ವೃದ್ಧರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಮನೆ ನೆಲಸಮಗೊಂಡು ಅದರಲ್ಲಿ ಹೂತು ಹೋದ ಕೆಲವನ್ನು ತೆಗೆಯುವ ಕಾಯಕದಲ್ಲಿ ಅಕ್ಕಪಕ್ಕದವರೇ ಪರಸ್ಪರ ನೆರವಾಗುತ್ತಿದ್ದಾರೆ.
ಸೂರಿನ ಭರವಸೆ
ಇಂತಹದೊಂದು ಊರು ಹೀಗಾದರೆ ಸ್ಥಳಿಕರು, ಆಡಳಿತ, ಸರಕಾರ ಬಿಟ್ಟು ಯಾರು ನೆರವಾಗಬಹುದು ಎಂಬ ಪ್ರಶ್ನೆ ಕಾಡಿದರೆ ಸೋದೆ ವಾದಿರಾಜ ಮಠ ಇಲ್ಲಿ ನೆಲಸಮವಾದ ಕುಟುಂಬಗಳಿಗೆ ಮನೆ ಮಾಡಲು ಮುಂದಾಗಿದೆ. ಈ ಪ್ರದೇಶವನ್ನು ದತ್ತು ರೀತಿಯಲ್ಲಿ ತೆಗೆದುಕೊಂಡು ಜನರ ಕಣ್ಣೀರರೊರೆಸಲು ಮುಂದಾಗುತ್ತಿದೆ. ಮುಖ್ಯ ರಸ್ತೆಯಿಂದ ಏಳೆಂಟು ಕಿಮೀ ಒಳಗಿರುವ ಈ ಹಳ್ಳಿಗೆ ರಾಡಿ ರಸ್ತೆಯಲ್ಲಿ ಹೋಗೋದೆ ಒಂದು ಸಾಹಸ. ಇಂತಹ ಹಳ್ಳಿಗೂ ಮಠದ ಪ್ರಮುಖರು ಸೂರಿನ ವಿಶ್ವಾಸ ತುಂಬಿದ್ದು ಎಲ್ಲರನ್ನು ಎಚ್ಚರಿಸಿದೆ. ಜನರಿಗಾದ ನಷ್ಟ ಹೇಳಲಾಗದು. ಕಟ್ಟಿಕೊಂಡಿದ್ದ ಬದುಕು ಹಾಳಾಗಿದೆ. ಬದುಕು ಅತಂತ್ರದಂತಾಗಿದೆ. ಈ ಜನರನ್ನು ಮೇಲೆತ್ತಲೂ ಸಾಧ್ಯವಾದ ಪ್ರಯತ್ನವನ್ನು ಸಾಧ್ಯವಿದ್ದವರು ಮಾಡಿ ಪುಣ್ಯ ಕಟ್ಟಿಕೊಳ್ಳಲಿ.
• ಜಾನು ಘಾಡಿ,
ಸೋಮನಳ್ಳಿ ಗ್ರಾ.ಪಂ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ
Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ
Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ
Yallapur: ಸಾತೊಡ್ಡಿ ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನು ನೊಣಗಳ ದಾಳಿ