ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಅರಶಿನ-ಕಾಳುಮೆಣಸಿನ ಕಷಾಯ
ಬಾಯಿಯ ದುರ್ಗಂಧವನ್ನು ನಿವಾರಿಸುವಲ್ಲಿ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
Team Udayavani, Sep 3, 2022, 12:15 PM IST
ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಪ್ರಾಕೃತಿಕವಾಗಿ ದೊರಕುವ ಗಿಡಮೂಲಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಂತಹ ಗಿಡಮೂಲಿಕೆಗಳಲ್ಲಿ ಅರಶಿನವು ಪ್ರಮುಖವಾದದ್ದು. ಅರಶಿನದ ಸೇವನೆಯಿಂದ ದೇಹದಲ್ಲಿನ ನಂಜಿನ ಅಂಶ ದೂರವಾಗಿ ಆರೋಗ್ಯವಂತ ಶರೀರವನ್ನು ಹೊಂದಬಹುದಾಗಿದೆ.
ಅರಶಿನವನ್ನು ಬಳಸಿಕೊಂಡು ಹಲವಾರು ಔಷಧಿಗಳನ್ನು ತಯಾರಿಸಲಾಗುತ್ತದೆ. ನಮ್ಮ ದಿನನಿತ್ಯದ ಆಹಾರ ಕ್ರಮಗಳಲ್ಲೂ ಇದನ್ನು ಬಳಸಬಹುದಾಗಿದೆ. ಇದನ್ನು ಬಳಸಿಕೊಂಡು ಅತ್ಯಂತ ಸುಲಭವಾಗಿ ತಯಾರಿಸಬಲ್ಲ ಅರಶಿನ- ಕಾಳುಮೆಣಸಿನ ಕಷಾಯದ ಸೇವನೆ ಶೀತ, ಗಂಟಲುನೋವು, ಹೃದಯ ಸಂಬಂಧಿ ಸಮಸ್ಯೆ,ಶ್ವಾಸಕೋಶದ ಸಮಸ್ಯೆಗಳನ್ನು ಒಳಗೊಂಡಂತೆ ಬಾಯಿಯ ದುರ್ಗಂಧವನ್ನು ನಿವಾರಿಸುವಲ್ಲಿ ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ.
ಅರಶಿನ- ಕಾಳು ಮೆಣಸಿನ ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು
ಅರಶಿನ, ಕಾಳುಮೆಣಸು, ಲಿಂಬೆಹಣ್ಣು ಮತ್ತು ಬೆಲ್ಲ.
ಮಾಡುವ ವಿಧಾನ
ಮೊದಲು 2 ಲೋಟ ನೀರಿಗೆ ಪುಡಿ ಮಾಡಿಕೊಂಡಿರುವ ಒಂದು ಚಮಚ ಅರಶಿನವನ್ನು ಹಾಕಿ. ನಂತರ ಇದಕ್ಕೆ ಕಾಳುಮೆಣಸನ್ನು ಪುಡಿಮಾಡಿ ಅರ್ಧ ಚಮಚದಷ್ಟು ಸೇರಿಸಿ. ಒಂದು ಲೋಟ ಕಷಾಯವಾಗುವಷ್ಟು ಚೆನ್ನಾಗಿ ಕುದಿಸಿ. ಆ ಬಳಿಕ ಅಗತ್ಯಕ್ಕೆ ತಕ್ಕಷ್ಟು ಬೆಲ್ಲ ಸೇರಿಸಿ. (ಮಧುಮೇಹಿಗಳು ಆದಷ್ಟು ಕಡಿಮೆ ಬೆಲ್ಲ ಸೇರಿಸುವುದು ಒಳ್ಳೆಯದು) ಹೀಗೆ ತಯಾರಿಸಲಾದ ಕಷಾಯಕ್ಕೆ ಕೊನೆಯಲ್ಲಿ ಸ್ವಲ್ಪ ಲಿಂಬೆಹಣ್ಣಿನ ರಸ ಸೇರಿಸಿ.