ನಿಮ್ಮನ್ನು ಕರಗಿಸಿದ ಕತ್ತಲೆಗೆ ಎದುರಾಗಿ ನಿಂತು ಹೊಡೆಯುವ ಧೈರ್ಯ ನಿಮ್ಮಲ್ಲಿದೆ..!
ಬದುಕೆಂದರೇ, ಏನೇನೋ ಅಲ್ಲ. ಪದ್ಯವಾಗುವ ಅವಕಾಶ
ಶ್ರೀರಾಜ್ ವಕ್ವಾಡಿ, May 31, 2021, 8:28 PM IST
ಬದುಕಿನಲ್ಲಿ ಎಷ್ಟೋ ಮಂದಿ ತಮ್ಮನ್ನು ತಾವು ಬೇಕಂತಲೇ ಕುಗ್ಗಿಸಿಕೊಂಡು ಇಲ್ಲದೇ ಇರುವ ಚಿಂತೆಗಳನ್ನು ತಲೆ ಮೇಲೆ ಹೊತ್ತುಕೊಂಡು ಬದುಕನ್ನು ಶಪಿಸುತ್ತಾ ಜೀವನಕ್ಕೆ ಅಂತ್ಯ ಹಾಡುವವರಿದ್ದಾರೆ. ಬಹುಶಃ ನಾವು ನಮ್ಮಲ್ಲಿನ ನೈತ್ಯಾತ್ಮಿಕ ಚಿಂತನಗಳನ್ನು ಮೊದಲು ತೆಗೆದು ಹಾಕಬೇಕು. ಬದುಕಿಗೆ ಶರಣಾಗತಿಯಾಗದೇ ಬದುಕು ನಮ್ಮನ್ನು ಬದುಕಿಸುವುದಿಲ್ಲ ಎನ್ನವುದನ್ನು ನಾವು ಮೊದಲು ಅರಿಯುಕೊಳ್ಳಬೇಕು.
‘ನಿನ್ನೆ’ ಹಾಗೂ ‘ನಾಳೆ’ ಗಳು ಈ ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ ಸುಳ್ಳು ಎಂದು ಭಾವಿಸಿದಾಗ ನಾವು ‘ಇಂದು’ ಚೆಂದಾಗಿ ಬಾಳ್ವೆ ಮಾಡುವುದಕ್ಕೆ ಸಾಧ್ಯವಿದೆ. ಬದುಕಿನ ಏರುಪೇರುಗಳನ್ನು ಆಸ್ವಾದಿಸದೇ ಬದುಕು ಬದುಕನ್ನಿಸುವುದಿಲ್ಲ. ಬದುಕನ್ನು ಬದುಕು ಅಂತನ್ನಿಸಿಕೊಳ್ಳುವುದಕ್ಕಾಗದರೂ ನಾವು ಏರುಪೇರುಗಳನ್ನು ಸಮಾನಾಹಿ ಸ್ವೀಕರಿಸುವಂತಹ ಮನಸ್ಥಿತಿಯನ್ನು ಹೊಂದಿರಬೇಕು.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 44473 ಜನ ಗುಣಮುಖ; 16604 ಹೊಸ ಪ್ರಕರಣ ಪತ್ತೆ
ನಿಮ್ಮ ನೀವು ಒಂದಿಷ್ಟು ನಂಬದಿರೇ.. ಬದುಕು ಸಾಗುವುದೇ ಇಲ್ಲ. ಬದುಕನ್ನು ಬರುವ ಹಾಗೆ ಬಂದು ಬಿಡಲು ಬಿಟ್ಟಾಗಲೇ ಅದು ಸಹ್ಯವಾಗಿ ಇರುತ್ತದೆ. ಹಾಗಂತ ಬಯಕೆಗಳು ಬದುಕಿನಲ್ಲಿ ಇರಬಾರದು ಎಂದರ್ಥವಲ್ಲ. ಬಯಕೆಗಳ ಬಗ್ಗೆ ಹೆಚ್ಚು ಚಿಂತೆಗಳಿರಬಾರದು. ಚಿಂತೆಗಳು ಬದುಕನ್ನು ಬರಡಾಗಿಸುತ್ತವೆ.
ನಿಮ್ಮನ್ನು ಕರಗಿಸಿದ ಕತ್ತಲೆಗೆ ಎದುರಾಗಿ ನಿಂತು ಹೊಡೆಯುವ ಧೈರ್ಯ ತಂದುಕೊಳ್ಳುವ ಭೀಮ ಗಾತ್ರದ ಶಕ್ತಿ ನಿಮ್ಮ ಒಳಗೆಲ್ಲೋ ಇದೆ. ಈಗ ನೀವದನ್ನು ಹೊರಗೆ ಕರೆಯಲೇ ಬೇಕು. ನಿಮಗೆ ನಾಳೆಗಳನ್ನು ಅತ್ಯಂತ ಸಂಭ್ರಮದಿಂದ ಕಾಣುವಂತಹ ಎಲ್ಲಾ ಸಾಮರ್ಥ್ಯವೂ ಇದೆ.
ಯಾಕೆ..? ಅನುಮಾನನಾ..?
ನಿಮ್ಮ ನಿಧಾನದಲ್ಲಿ ವೇಗವಿದೆ, ನಿಮ್ಮ ಮೌನದಲ್ಲಿ ಹರ್ಷವಿದೆ, ನಿಮ್ಮ ದುಃಖದಲ್ಲಿ ಸುಖವಿದೆ. ನಿಮಗೆ ಹತ್ತಿರದಲ್ಲೇ ಒಂದು ತಿರುವಿದೆ. ಅಲ್ಲಿ ತಿರುಗಬೇಕಷ್ಟೇ. ನಿರ್ಧಾರಗಳು ಕುಸಿಯದಿರಲಿ. ಸಮಸ್ತ ಭಾವ ಇಷ್ಟಕಾವ್ಯ ನಿಮ್ಮ ಎದೆ ತೆಕ್ಕೆಯಲ್ಲೇ ಇದೆ. ಅವುಗಳಿಗೆ ನಿಮ್ಮದೇ ಯಜಮಾನಿಕೆ.
‘ಭಾವುಕತೆಯ ತೀವ್ರತೆ’ ನಿಮಗೆ ಗೊತ್ತಿಲ್ಲ ಸ್ವಾಮಿ’ ಎಂದು ನೀವು ಹೇಳಬಹುದು. ಆದರೇ, ನಿಮ್ಮ ಬದುಕಿನಲ್ಲಿ ಆ ಅನುಭವವನ್ನು ವಿಸ್ತರಿಸುವ ಅಥವಾ ಕಡಿತಗೊಳಿಸುವ ತೀರ್ಮಾನ ಮಾಡಬೇಕಾದದವರು ನೀವೇ. ಮತ್ಯಾರೂ ಅದನ್ನು ಮಾಡಲಾರರು. ನಿಮ್ಮ ಮನಸ್ಸಿಗೆ, ನಿಮ್ಮ ಒಳಮನಸ್ಸಿನ ಕ್ರಿಯೆಗೆ ಕಾಯುವಷ್ಟು ತಾಳ್ಮೆ ಇಲ್ಲ. ನೀವೇನೂ ನಿರ್ಣಯ ಕೈಗೊಂಡಿಲ್ಲವೆಂದರೇ, ನಿಮ್ಮನ್ನು ಅದು ಕೊರೆಯಲಾರಂಭಿಸುತ್ತದೆ.
ನಿಮ್ಮ ಮನಸ್ಸು, ನಿಮ್ಮ ಮೌನದ ತೀವ್ರವಾದ ವಿಸ್ತಾರವನ್ನು ಕಂಡು ನಿಮ್ಮನ್ನು ಕೊಲ್ಲುವುದಕ್ಕೆ ಕತ್ತಿ, ಚೂರಿ, ತಲ್ವಾರು, ಪಿಸ್ತೂಲು ಹಿಡಿದುಕೊಂಡು ತಯಾರಾಗುತ್ತದೆ. ಹಾಗಾಗಿ, ಮೌನ ಎಲ್ಲದಕ್ಕೂ ಉತ್ತರವಲ್ಲ. ಲವಲವಿಕೆ ನಿಮ್ಮನ್ನು ನೀವು ಊಹಿಸಿಕೊಳ್ಳಲಾರದಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎನ್ನುವುದರಲ್ಲಿ ಏನು ಅಚ್ಚರಿ ಇಲ್ಲ.
ಕೊನೆ ಹಾಡಬೇಕಾಗಿರುವುದು ನಿಮ್ಮೊಳಗಿನ ನೈತ್ಯಾತ್ಮಿಕ ಹೊಲಸುಗಳಿಗೆ. ನಿಮಗೆ ಗೊತ್ತಿಲ್ಲದೇ ಅವಿತಿದೆ ನಿಮ್ಮ ಎದೆಯಾಳದಲ್ಲಿ ಜಗ ಗೆಲ್ಲುವ ಶಕ್ತಿ. ನಿಮಗೆ ಖಂಡಿತ ಗೊತ್ತಿಲ್ಲ, ನೀವೀಗ ಏನಿದ್ದೀರಿ ಅದಲ್ಲ ನೀವು. ನೀವೆಂದರೇ, ಧನಾತ್ಮಕತೆಯ ತೊಟ್ಟಿಲು ತೂಗುವ ಕೈಗಳು.
ನಕ್ಷತ್ರಗಳ ನಗುವಿನ ಸಾರೂಪ್ಯ ನಿಮ್ಮಲ್ಲೇ ಇದೆ. ನೀವು ನೀವಾದ ಮೇಲೆ ಖಂಡಿತ ಅದು ಮಿನುಗುತ್ತದೆ. ಬದುಕೆಂದರೇ, ಏನೇನೋ ಅಲ್ಲ. ಪದ್ಯವಾಗುವ ಅವಕಾಶ.
-ಶ್ರೀರಾಜ್ ವಕ್ವಾಡಿ
ಇದನ್ನೂ ಓದಿ : ಲಾಕ್ಡೌನ್ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ: ಡಾ. ಸುಧಾಕರ್