ಗಣ್ಯರಿಗೆ ನಾಲ್ವಡಿ ಪ್ರಶಸ್ತಿ ಪ್ರದಾನ
ಜಗತ್ತಿಗೆ 18 ಉತ್ಪನ್ನ ಪರಿಚಯಿಸಿದ ಅರಸರು ಮೈಸೂರನ್ನು ಐಕಾನ್ ಮಾಡಲು ಪ್ರೋತ್ಸಾಹಿಸಿದ ಮೈಸೂರು ಮಹಾರಾಜರು: ಕೃಷ್ಣೇಗೌಡ
Team Udayavani, Oct 14, 2021, 1:48 PM IST
ಮೈಸೂರು: ಈ ನಾಡನ್ನು ದೂರದೃಷ್ಟಿತ್ವದಲ್ಲಿ ಕಟ್ಟಿದ ಮೈಸೂರು ಮಹಾರಾಜರ ವಂಶಸ್ಥರನ್ನು ಸರ್ಕಾರಗಳು ಕಾಲ ಕಾಲಕ್ಕೆ ಸರಿಯಾಗಿ ನಡೆಸಿಕೊಂಡಿಲ್ಲ. ಅವರಿಗೆ ನೀಡಬೇಕಾಗಿರುವ ಗೌರವ ನೀಡುತ್ತಿಲ್ಲ ಎಂದು ವಾಗ್ಮಿ ಪ್ರೊ. ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು. ಜಿಲ್ಲಾಡಳಿತದಿಂದ ಅರಮನೆ ವೇದಿಕೆ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
18 ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಮೈಸೂರನ್ನು ಐಕಾನ್ ಮಾಡಲು ಪ್ರೋತ್ಸಾಹಿಸಿದವರು ಮೈಸೂರು ಮಹಾರಾಜರಾಗಿದ್ದಾರೆ. ದೇಶದ ಯಾವುದೇ ನಗರದಲ್ಲಿಯೂ ಐಕಾನ್ ಆಗುವ ಇಷ್ಟೊಂದು ಅಂಶಗಳಿಲ್ಲ. ಮೈಸೂರನ್ನು ಮಾದರಿ ಬದುಕಿನ ಶೈಲಿಯಾಗಿ ರೂಪಿಸಿದವರು ಮೈಸೂರು ಒಡೆಯರು. ಅವರಲ್ಲಿ ಪ್ರಮುಖರೆನಿಸಿಕೊಂಡಿರುವ ನಾಲ್ವಡಿಯವರನ್ನು ಬೇರೆ ಬೇರೆ ವೇದಿಕೆಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗಬೇಕಿದೆ. ಕಾಲ ಕಾಲಕ್ಕೆ ಬಂದ ಸರ್ಕಾರಗಳು ಅವರನ್ನು ಸ್ಮರಿಸಿಕೊಳ್ಳುವ ಕೆಲಸ ಮಾಡಿರಲಿಲ್ಲ. ಈ ನಿಟ್ಟಿನಲ್ಲಿ ಈಗಿನ ಸಚಿವರು ಅವರ ಹೆಸರಿನಲ್ಲಿ ಇಂತಹ ಕಾರ್ಯಕ್ರಮ ಮಾಡಿರುವುದು ಸ್ವಾಗತಾರ್ಹ ಎಂದರು.
ಇದನ್ನೂ ಓದಿ;- ಕೋಟಿಗೊಬ್ಬ-3 ವಿಳಂಬ | ಅಭಿಮಾನಿಳಲ್ಲಿ ಕ್ಷಮೆ ಕೋರಿದ ನಟ ಸುದೀಪ್
ನಾಲ್ವಡಿ ಸ್ಮರಣೆ: ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಾಲ್ವಡಿಯವರ ಕೊಡುಗೆ ಇಲ್ಲದಿದ್ದರೆ ನಮ್ಮ ಮೈಸೂರು ಎನಾಗುತ್ತಿತ್ತೋ ಎಂಬುದನ್ನು ಹೇಳಲು ಅಸಾಧ್ಯ. ಅಂದು ಕೈಗಾರಿಕೆ, ಕಲೆ ಸೇರಿ ಎಲ್ಲಾ ರಂಗದಲ್ಲಿಯೂ ಹೊಸ ಪ್ರಯತ್ನ ಪ್ರಾರಂಭಿಸಿದರು. ಮಹಿಳೆಯರ ವಿದ್ಯಾಭ್ಯಾಸಕ್ಕೆ ಶಾಲಾ-ಕಾಲೇಜು ತೆರೆದರು.
ರೈತರ ಹಣ ಕೂಡಿಡಲೂ ಸಹಕಾರ ಬ್ಯಾಂಕ್ಗಳನ್ನು ತೆರೆದರು. ಕೈಗಾರಿಕೆ ಇಲ್ಲದಿದ್ದರೆ ದೇಶದ ಸಂಸ್ಕೃತಿ ಉಳಿಯುವುದಿಲ್ಲ ಎಂಬುದನ್ನು ಅರಿತು ಅನೇಕ ಕೈಗಾರಿಕೆ ಪ್ರಾರಂಭಿಸಿದರು. ಅದರೊಟ್ಟಿಗೆ ಸಂಶೋಧನೆಗೆ ಅಂದು ಟಾಟಾ ಇನ್ ಸ್ಟಿಟ್ಯೂಟ್ ನಿರ್ಮಾಣ ಆಗಲು ಬಹುದೊಡ್ಡ ಕಾರಣರಾಗಿದ್ದಾರೆ ಎಂದು ನಾಲ್ವಡಿಯವರನ್ನು ಸ್ಮರಿಸಿದರು.
12 ಸಾಧಕರಿಗೆ ಪ್ರಶಸ್ತಿ ಪ್ರದಾನ: ಡಾ. ಜಿ.ಎಸ್. ಜಯದೇವ (ಶಿಕ್ಷಣ), ಈಚನೂರು ಕುಮಾರ್ (ಮೈಸೂರು ಅರಸರ ಇತಿಹಾಸ), ಡಾ. ಶಂಕೇಗೌಡ (ವೈದ್ಯಕೀಯ), ಡಾ. ಸುಕನ್ಯ ಪ್ರಭಾಕರ್ (ಸಂಗೀತ), ಅಂಶಿ ಪ್ರಸನ್ನಕುಮಾರ್ (ಪತ್ರಿಕೋದ್ಯಮ), ಹನಸೋಗೆ ಸೋಮಶೇಖರ್ (ನಾಲ್ವಡಿ ಸಾಹಿತ್ಯ), ಜೀನಗಳ್ಳಿ ಸಿದ್ದಲಿಂಗಪ್ಪ (ಜಾನಪದ), ಕಿರಗಸೂರು ರಾಜಪ್ಪ (ರಂಗಭೂಮಿ), ಗುರುರಾಜ್ (ಪರಂಪರಿಕ ಗಾಯನ), ರಾಜೇಂದ್ರ (ಅನ್ನದಾಸೋಹ), ಅರಿವು ಶಿಕ್ಷಣ ಸಂಸ್ಥೆ (ಸಂಸ್ಥೆ), ಅರುಣ್ ಯೋಗಿರಾಜ್ ಪರವಾಗಿ ಹೆಂಡತಿ, ತಾಯಿ (ಶಿಲ್ಪಕಲೆ) ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಅಧ್ಯಕ್ಷರಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಟಿ.ಸೋಮಶೇಖರ್, ಪ್ರಶಸ್ತಿಯ ತೀರ್ಪುಗಾರರಾದ ಹಿ.ಶಿ.ರಾಮಚಂದ್ರೇಗೌಡ, ಡಾ.ಸಿ.ನಾಗಣ್ಣ, ಡಾ.ಎನ್. ಎಸ್.ತಾರಾನಾಥ್, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್ .ವಿ.ರಾಜೀವ್, ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಂ.ಪಣೀಶ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಎಂ.ಆರ್.ಕೃಷ್ಣಪ್ಪಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಇನ್ನಿತರರು ಉಪಸ್ಥಿತರಿದ್ದರು.