ದಸರಾ ಮಹೋತ್ಸವ: ಅಂತಿಮ ಹಂತದ ಫಿರಂಗಿ ತಾಲೀಮು ಯಶಸ್ವಿ
Team Udayavani, Sep 23, 2022, 9:30 PM IST
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಗಜಪಡೆ ಹಾಗೂ ಅಶ್ವದಳಕ್ಕೆ ಅಂತಿಮ ಹಂತದ ಫಿರಂಗಿ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಯಿತು.
ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ವೇಳೆ 21 ಸುತ್ತು ಕುಶಾಲತೋಪು ಸಿಡಿಸುವ ಸಂಪ್ರದಾಯವಿದ್ದು, ಈ ವೇಳೆ ಭಾರೀ ಸದ್ದಿಗೆ ಆನೆಗಳು ಹಾಗೂ ಅಶ್ವದಳ ಬೆದರದಂತೆ ಅಭ್ಯಾಸ ಮಾಡಿಸುವ ಸಲುವಾಗಿ ವಸ್ತುಪ್ರದರ್ಶನದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ 3ನೇ ಹಂತದ ಫಿರಂಗಿ ತಾಲೀಮು ನಡೆಸಲಾಯಿತು.
ಮೊದಲ ಹಾಗೂ 2ನೇ ತಾಲೀಮಿನಲ್ಲಿ ಬೆದರಿದ್ದ ಪಾರ್ಥಸಾರಥಿ, ಸುಗ್ರೀವ, ಶ್ರೀರಾಮ ಆನೆಗಳು 3ನೇ ತಾಲೀಮಿನಲ್ಲಿ ಬೆದರದೆ ಭಾರೀ ಶಬ್ದಕ್ಕೆ ಒಗ್ಗಿಕೊಂಡವು. ಎಂದಿನಂತೆ ಈ ಬಾರಿಯೂ ಧನಂಜಯ ಸಿಡಿಮದ್ದು ಸಿಡಿಸುತ್ತಿದ್ದಂತೆ ಬೆದರಿದ. ಹೊಸ ಆನೆಯಾದ ಪಾರ್ಥಸಾರಥಿ ಒಂದಿಷ್ಟೂ ಬೆದರದೇ ಧೈರ್ಯ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದ. ಉಳಿದಂತೆ ಅಂಬಾರಿ ಆನೆ ಅಭಿಮನ್ಯು, ಅರ್ಜುನ ಸೇರಿ ಎಲ್ಲಾ ಆನೆಗಳು ಧೈರ್ಯವಾಗಿ ನಿಂತಿದ್ದವು. ಒಟ್ಟಾರೆ 2022ರ ದಸರಾ ಉತ್ಸವದಲ್ಲಿನ ಗಜಪಡೆ, ಅಶ್ವದಳಕ್ಕೆ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ನೆರವೇರಿತು.