ಎಸ್ಪಿ-ಬಿಎಸ್ಪಿ ಡ್ಯುಯೆಟ್
Team Udayavani, Mar 23, 2019, 12:30 AM IST
ಎಸ್ಪಿ ಮತ್ತು ಬಿಎಸ್ಪಿ ಉತ್ತರ ಪ್ರದೇಶದಲ್ಲಿ ಮೈತ್ರಿಯ ನಡೆ ತೋರಿರುವುದು ಹುಟ್ಟಿಸಿರುವ ಅಚ್ಚರಿಯೆ ಬೇರೆ. ಪ್ರಮುಖ ರಾಷ್ಟ್ರೀಯ ಪಕ್ಷಗಳನ್ನೇ ಬದಿಗೆ ಸರಿಸಿ ಎರಡು ಪ್ರಾದೇಶಿಕ ಪಕ್ಷಗಳು ಕೈ ಕೈ ಹಿಡಿದು ಸಾಗುತ್ತಿರುವುದೇ ಈ ಅಚ್ಚರಿಗೆ ಕಾರಣ.
ಮಣಿಪಾಲ: ಈ ಚರ್ಚೆ ಆರಂಭವಾಗುತ್ತಿರು ವುದೇ ಹೀಗೆ. ಉತ್ತರ ಪ್ರದೇಶದಲ್ಲಿ ಒಂದು ಸಂದರ್ಭದಲ್ಲಿ ಪರಸ್ಪರ ಗುದ್ದಾಡಿದ್ದ ಎರಡೂ ಪಕ್ಷಗಳು ಈಗ ಆಲಿಂಗಿಸಿಕೊಂಡರೇ ನರೇಂದ್ರ ಮೋದಿ-ಅಮಿತ್ ಷಾ ಯಾತ್ರೆಗೆ ತಡೆಯೊ ಡ್ಡೀತೇ? ಎಂಬುದು. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಕಂಡಿತ್ತು. ಹಾಗಾಗಿ ಈ ಬಾರಿ ಚುನಾವಣಾ ಪೂರ್ವ ಮೈತ್ರಿಗೆ ಮುಂದಾಗಿವೆ ಈ ಎರಡೂ ಪಕ್ಷಗಳು. ಮೇಲ್ನೋಟಕ್ಕೆ ಮೋದಿ ಸೋಲಿಸಲು ಎಂದಿ ದ್ದರೂ ವಾಸ್ತವವಾಗಿ ಭಿನ್ನತೆಯಲ್ಲೂ ಏಕತೆ ತೋರಿರುವುದು ರಾಜಕೀಯ ಅಸ್ತಿತ್ವಕ್ಕಾಗಿ. ಭಿನ್ನ ರುಚಿಯವರು ಒಟ್ಟಾದದ್ದು ಇದೇನೂ ಹೊಸದಲ್ಲ. ಈ ಹಿಂದೆ 1993ರಲ್ಲಿ ಇವರೇ ಒಂದಾಗಿ 176 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದರೆ, ಬಿಜೆಪಿ 177 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿತ್ತು. ಈಗ 25 ವರ್ಷ ಗಳ ಬಳಿಕ ಮತ್ತೆ ಒಂದಾಗಿದ್ದಾರೆ.
ಮಹಾಘಟ್ಬಂಧನ್ ಏನಾಯಿತು
ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದಾಗ ಬಿಜೆಪಿಯೇತರ ಪಕ್ಷಗಳು ಮಹಾಘಟ್ಬಂಧನ್ಗೆ ಮುಂದಾದವು. ನಿತೀಶ್ ಕುಮಾರ್, ಲಾಲೂ ಪ್ರಸಾದ್, ಮುಲಾಯಂ ಸಿಂಗ್ ಯಾದವ್, ಮಮತಾ ಬ್ಯಾನರ್ಜಿ, ಎಚ್.ಡಿ. ದೇವೇಗೌಡ, ಶರದ್ ಪವಾರ್, ಚಂದ್ರಬಾಬು ನಾಯ್ಡು ಮೊದಲಾದ ನಾಯಕರನ್ನು ಒಗ್ಗೂಡಿಸುವುದು ಲೆಕ್ಕಾಚಾರ. ಆರಂಭದಲ್ಲೇ ನಿತೀಶ್ ಕುಮಾರ್ ಹೊರ ನಿಂತರು. ಬಳಿಕ ಎಸ್ಪಿ ಮತ್ತು ಬಿಎಸ್ಪಿ ಯವರೂ ಹೊರ ನಿಂತರು. ಈಗ ಕಾಂಗ್ರೆಸ್ ಏಕಾಂಗಿ.
ಒಂದು ಅಚ್ಚರಿ ಅಂಶವೆಂದರೆ, ಕಾಂಗ್ರೆಸ್ ಸ್ನೇಹದ ಹಸ್ತ ಚಾಚಿದರೂ ಇವರಿಬ್ಬರೂ ದೂರ ಸರಿಯುತ್ತಿರುವುದು. ಮೊನ್ನೆ ಯಷ್ಟೇ ಕಾಂಗ್ರೆಸ್, ಎರಡೂ ಪಕ್ಷಕ್ಕೆ ಒಂದಷ್ಟು ಸೀಟುಗಳನ್ನು ಬಿಟ್ಟುಕೊಡುವ ಉದಾರತೆ ತೋರಿಸಿತು. ಇದು ಒಂದುಬಗೆಯಲ್ಲಿ ನಮ್ಮ ಮೈತ್ರಿಯಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಎಂದು ನಿರಾಕರಿಸಿದೆ ಮೈತ್ರಿ ಪಕ್ಷಗಳು. ಒಂದು ಅಂಶವೆಂದರೆ, ಈ ಮೂಲಕ ಪ್ರಮುಖ ರಾಷ್ಟ್ರೀಯ ಪಕ್ಷಗಳನ್ನು ಬದಿಗಿಟ್ಟು ಪ್ರಾದೇಶಿಕ ಪಕ್ಷಗಳೇ ಮೈತ್ರಿ ಸರ್ಕಸ್ಗೆ ಮುಂದಾಗಿರುವುದು ಸಮ್ಮಿಶ್ರ ಸರಕಾರದ ಪ್ರಯೋಗದಲ್ಲಿ ಮತ್ತೂಂದು ಹೊಸ ಪ್ರಯೋಗ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
ಎಸ್ಪಿ -ಬಿಎಸ್ಪಿ ಮೈತ್ರಿ ಪ್ರವರ
ಇಲ್ಲಿರುವುದು 80 ಲೋಕಸಭಾ ಕ್ಷೇತ್ರಗಳು. ಅತೀ ದೊಡ್ಡ ರಾಜ್ಯ. ಇಲ್ಲಿ ಹೆಚ್ಚಿನ ಸ್ಥಾನ ಪಡೆದ ಪಕ್ಷ ಕೇಂದ್ರದಲ್ಲಿ ಅಧಿಕಾರ ಗಳಿಸುತ್ತದೆಂದು ರಾಜಕೀಯ ಗಾದೆಯಷ್ಟೇ ಅಲ್ಲ, ವಾಸ್ತವವೂ ಹೌದು. ಎಸ್ಪಿಗೆ ಹೋಲಿಸಿದರೆ ಉತ್ತರ ಪ್ರದೇಶದಲ್ಲಿ ಬಿಎಸ್ಪಿಯದ್ದು ದೊಡ್ಡ ಇತಿಹಾಸ. ಮಾಯಾವತಿ ಬಿಎಸ್ಪಿ ನಾಯಕಿಯಾಗಿರುವುದಕ್ಕೆ ಕಾರಣ ಕಾನ್ಶಿ ರಾಮ್. 1984ರಲ್ಲಿ ಕಾನ್ಶಿ ರಾಮ್ ಬಹುಜನ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದ್ದರು. ಬಳಿಕ ಮುಲಾಯಂ ಸಿಂಗ್ ಯಾದವ್ 1992ರಲ್ಲಿ ಸಮಾಜವಾದಿ ಪಕ್ಷವನ್ನು ಕಟ್ಟಿದರು. ಯಾದವ ಸಮುದಾಯದ ಪ್ರಬಲ ನಾಯಕ ಮುಲಾಯಂ ಸಿಂಗ್ ರದ್ದು ಸೈಕಲ್ ಗುರುತಾದರೆ, ಮಾಯಾವತಿ ನೇತೃತ್ವದ ಬಿಎಸ್ಪಿಯದ್ದು ಆನೆ. ಪ್ರಸ್ತುತ ಎಸ್ ಪಿಯ ಚುಕ್ಕಾಣಿ ಹಿಡಿದವರು ಅಖೀಲೇಶ್ ಯಾದವ್.