ನಕ್ಸಲರಿಂದ ಮಹಿಳಾ ಚುನಾವಣಾಧಿಕಾರಿಯ ಹತ್ಯೆ
Team Udayavani, Apr 18, 2019, 6:00 AM IST
ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಬುಧವಾರ ಮಹಿಳಾ ಚುನಾವಣಾ ಅಧಿಕಾರಿಯೊಬ್ಬರನ್ನು ಮಾವೋವಾದಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಗುರುವಾರ 2ನೇ ಹಂತದ ಮತದಾನ ನಡೆಯಲಿರುವ ಕಾರಣ ವಲಯಾಧಿಕಾರಿ ಸಂಜುಕ್ತಾ ದಿಗಾಲ್ ಅವರು ಚುನಾವಣಾ ಸಿಬ್ಬಂದಿಯ ತಂಡವೊಂದನ್ನು ಮತಗಟ್ಟೆಯೊಂದಕ್ಕೆ ಕರೆದೊಯ್ಯುತ್ತಿದ್ದರು. ಅರಣ್ಯದ ಹಾದಿಯಲ್ಲಿ ಸಾಗುವಾಗ ರಸ್ತೆ ಮಧ್ಯೆ ಅನುಮಾನಾಸ್ಪದ ವಸ್ತುವೊಂದು ಬಿದ್ದಿದ್ದನ್ನು ಕಂಡು, ವಾಹನ ನಿಲ್ಲಿಸುವಂತೆ ಸೂಚಿಸಿದರು. ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಅವರನ್ನು ನಕ್ಸಲರು ಗುಂಡಿಕ್ಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಈಗ ಮೋದಿ ವಿರುದ್ಧ ಪ್ರಚಾರ ಮಾಡುತ್ತಿರುವ ಕಾರಣ, ಅವರ ರ್ಯಾಲಿಗಳ ವೆಚ್ಚದ ಬಗ್ಗೆ ಬಿಜೆಪಿ ಪ್ರಶ್ನಿಸುತ್ತಿದೆ. ನಿಮಗೆ ನಿಜವಾಗಲೂ ತಾಕತ್ತಿದ್ದರೆ ಉದ್ಧವ್ ಠಾಕ್ರೆ ನಿವಾಸದ ಮೇಲೆ ಐಟಿ ದಾಳಿ ನಡೆಸಿ.
ನವಾಬ್ ಮಲಿಕ್, ಎನ್ಸಿಪಿ ವಕ್ತಾರ
ನಾವು ದೇಶದಲ್ಲಿ ನುಸುಳು ಕೋರರನ್ನು ತಡೆಯಲು ಪೌರತ್ವ ವಿಧೇಯಕ ಜಾರಿ ಮಾಡಿದ್ದರೆ, ವಿಪಕ್ಷಗಳು ಮಾತ್ರ ನುಸುಳುಕೋರರ ಮಾನವ ಹಕ್ಕುಗಳ ರಕ್ಷಣೆ ಬಗ್ಗೆಯೇ ಕಾಳಜಿ ಹೊಂದಿವೆ.
ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಈ ಲೋಕಸಭೆ ಚುನಾವಣೆ ಕೃಷ್ಣ ಮತ್ತು ಕಂಸ, ರಾಮ ಮತ್ತು ರಾವಣ, ಗೋಡ್ಸೆ ಮತ್ತು ಗಾಂಧಿ ನಡುವೆ ನಡೆಯುತ್ತಿರುವ ಯುದ್ಧ. ನೆರೆ ರಾಷ್ಟ್ರಗಳು ಮುಂದುವರೆಯುತ್ತಿವೆ. ನಮ್ಮ ದೇಶದಲ್ಲಿ ಕಳ್ಳ ಚೌಕೀದಾರರು ತಯಾರಾಗುತ್ತಿದ್ದಾರೆ.
ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ನಾಯಕ
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ರನ್ನು ನಾನು ಭೋಪಾಲ್ಗೆ ಸ್ವಾಗತಿಸುತ್ತೇನೆ. ಭೋಪಾಲ್ನ ಶಾಂತಿಯುತ, ಶಿಕ್ಷಿತ ಹಾಗೂ ಘನತೆ ತುಂಬಿದ ಪರಿಸರವು ನಿಮ್ಮನ್ನು ಖಂಡಿತಾ ಆಕರ್ಷಿಸಿರುತ್ತದೆ.
ದಿಗ್ವಿಜಯ್, ಕಾಂಗ್ರೆಸ್ ನಾಯಕ
ನಮ್ಮ ಸನಾತನ ಧರ್ಮ, ಕೇಸರಿಯ ಮಾನಹಾನಿಯ ಬೀಜವನ್ನು ಬಿತ್ತಿದವರೇ ದಿಗ್ವಿಜಯ್ ಸಿಂಗ್. ಅವರು ಕೇಸರಿ ಮತ್ತು ಹಿಂದುತ್ವವನ್ನು ಭಯೋತ್ಪಾದನೆ ಎಂದು ಕರೆದರು. ಅಧರ್ಮದ ವಿರುದ್ಧ ಧರ್ಮಕ್ಕೇ ಜಯ ಸಿಗುವಂತೆ ನಾನು ಮಾಡುತ್ತೇನೆ.
ಪ್ರಜ್ಞಾ ಸಿಂಗ್ ಠಾಕೂರ್, ಬಿಜೆಪಿ ನಾಯಕಿ