ಸಂವಿಧಾನ ನಾಶ ಮಾಡುವ ಯತ್ನ ನಡೆದಿದೆ: ಪ್ರಿಯಾಂಕಾ
Team Udayavani, Apr 15, 2019, 6:00 AM IST
ಅಸ್ಸಾಂನ ಸಿಲ್ಚಾರ್ನಲ್ಲಿ ರೋಡ್ ಶೋ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, “ದೇಶದ ಪವಿತ್ರ ಸಂವಿಧಾನಕ್ಕೆ ಹಾಲಿ ಆಡಳಿತವು ಗೌರವ ಕೊಡುತ್ತಿಲ್ಲ. ಸಂವಿಧಾನವನ್ನು ನಾಶ ಮಾಡಲು ಕೆಲವರು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಮಹಾಪುರುಷ ಅಂಬೇಡ್ಕರ್ ಅವರು ಸಂವಿಧಾನದ ಮೂಲದ ಈ ದೇಶಕ್ಕೆ ಅಡಿಪಾಯ ಹಾಕಿಕೊಟ್ಟರು. ಅಂಥ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿದೆ.
ಆದರೆ, ಈಗಿನ ಸರಕಾರ ಸಂವಿಧಾನವನ್ನೇ ನಾಶ ಮಾಡಲು ಹೊರಟಿದೆ ಎಂದೂ ಪ್ರಿಯಾಂಕಾ ಹೇಳಿದ್ದಾರೆ. ಇದೇ ವೇಳೆ, ಉ.ಪ್ರದೇಶದ ವಾರಾಣಸಿಯನ್ನು ಪ್ರಧಾನಿ ಮೋದಿ ನಿರ್ಲಕ್ಷಿಸಿದ್ದಾರೆ ಎಂದೂ ಆರೋಪಿಸಿದ ಪ್ರಿಯಾಂಕಾ, ಕಳೆದ 5 ವರ್ಷಗಳಲ್ಲಿ ವಾರಾಣಸಿಯ ಯಾರೊಬ್ಬರ ಜೊತೆಗೂ ಮೋದಿ 5 ನಿಮಿಷವನ್ನೂ ಕಳೆದಿಲ್ಲ. ಅಮೆರಿಕ, ಚೀನ, ರಷ್ಯಾ, ಆಫ್ರಿಕಾಗೆ ಹೋಗಿ ಅಲ್ಲಿನ ನಾಯಕರನ್ನು ಆಲಿಂಗಿಸಲು, ಪಾಕಿಸ್ಥಾನಕ್ಕೆ ಹೋಗಿ ಬಿರಿಯಾನಿ ತಿನ್ನಲು ಮೋದಿಯವರಿಗೆ ಸಮಯವಿದೆ. ಆದರೆ, ತಮ್ಮ ಸ್ವಂತ ಕ್ಷೇತ್ರದಲ್ಲಿ ಜನರೊಂದಿಗೆ ಸಂವಾದ ನಡೆಸಿ, ಅವರ ಕಷ್ಟಸುಖ ಅರಿಯಲು ಅವರಿಗೆ ಸಾಧ್ಯವಾಗಿಲ್ಲ ಎಂದೂ ಹೇಳಿದ್ದಾರೆ.