ಎನಿ ಟೈಮ್, ಎನಿವೇರ್ ಚರ್ಚೆಗೆ ರೆಡಿ
Team Udayavani, Apr 11, 2019, 12:47 PM IST
ಪಾಂಡವಪುರ: ಮಂಡ್ಯಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವುದಕ್ಕೆ ನಾನು ಸಿದ್ಧಳಿದ್ದೇನೆ. ಎನಿ ಟೈಮ್, ಎನಿ ವೇರ್ ನಾನು ಚರ್ಚೆಗೆ ರೆಡಿ
ಎಂದು ಹೇಳುವ ಮೂಲಕ ಅಭಿವೃದ್ಧಿ ಬಗ್ಗೆ ಮಾತನಾಡೋಲ್ಲ ಕೇವಲ ಆರೋಪ ಮಾಡುತ್ತಾರೆ ಎನ್ನುವ ನಿಖೀಲ್ಗೆ ಸುಮಲತಾ ಬಹಿರಂಗ ಸವಾಲು ಹಾಕಿದ್ದಾರೆ.
ತಾಲೂಕಿನ ಬಿ.ಟಿ.ಕೊಪ್ಪಲು, ಎಣ್ಣೆಹೊಳೆ ಕೊಪ್ಪಲು ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯ ಅಭಿವೃದ್ಧಿ ಬಗ್ಗೆ ಮಾತ ನಾಡುವುದಕ್ಕೆ ನಾನು ಸಿದ್ಧಳಿದ್ದೇನೆ. ಅವರು ಎಲ್ಲಿ, ಯಾವಾಗ ಬೇಕಾದರೂ ಕರೆಯಲಿ. ಚರ್ಚೆಗೆ ಬರಲು ಸಿದ್ಧಲಿದ್ದೇನೆ. ಜೆಡಿಎಸ್ ನಾಯಕರು ನನ್ನನ್ನು ಟೀಕೆ ಮಾಡುವಾಗ ಮಂಡ್ಯ ಅಭಿವೃದ್ಧಿ ನೆನಪಾಗಲಿಲ್ಲವೇ ಎಂದು ಟಾಂಗ್ ನೀಡಿದರು.
ಜೆಡಿಎಸ್ ನಾಯಕರ ಹೇಳಿಕೆಗಳನ್ನು ಜನರು ಕೇಳಿದ್ದಾರೆ. ಈ ಹೇಳಿಕೆಗಳ ಬಗ್ಗೆ ಜನರಿಗೆ ಕೋಪವಿದೆ. ಈಗ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ಜನರು ನಂಬುವುದಿಲ್ಲ ಎಂದ ಸುಮಲತಾ, ದರ್ಶನ್ ಹಾಗೂ ಯಶ್ಗೆ ಅಭಿಮಾನಿಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ. ದರ್ಶನ್ ಅಭಿಮಾನಿಗಳು ಈಗ ಜೆಡಿಎಸ್
ಸೇರಿದ್ದಾರೆ ಎಂದರೆ ಅದರ ಹಿಂದೆ ಏನಿರಬಹುದು ಎನ್ನುವುದನ್ನು ಯೋಚನೆ ಮಾಡಬೇಕು ಎಂದು ನಯವಾಗಿಯೇ ಉತ್ತರಿಸಿದರು.
ನ್ಯಾಯ ಸಿಕ್ಕಿದೆ: ಅನ್ಯಾಯದ ವಿರುದ್ಧ ಎತ್ತಿದ ಧ್ವನಿಗೆ ನ್ಯಾಯ ಸಿಕ್ಕಿದೆ. ಅಧಿಕಾರದಲ್ಲಿದ್ದಾಗ ಇವರು ಯಾರನ್ನೂ ವರ್ಗಾವಣೆ ಮಾಡಿಲ್ವಾ.
ಅಧಿಕಾರದಲ್ಲಿರುವ ಪಕ್ಷಗಳು, ಅಧಿಕಾರಿಗಳನ್ನು ಚುನಾವಣೆಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದನ್ನು ಗಮನಿಸಿಯೇ
ಚುನಾವಣಾ ಆಯೋಗ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ಅವರ ವರ್ಗಾವಣೆಯಿಂ ಇವರಿಗಾದ ನಷ್ಟವೇನು? ಚುನಾವಣಾ ಆಯೋಗದ ಬಗ್ಗೆ ಮಾತನಾಡ್ತಿದ್ದಾರೆ ಎಂದು ಸುಮಲತಾ ಪ್ರಶ್ನಿಸಿದರು.
ಲಾಭ ಪಡೆಯಲು ಯತ್ನ: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಚುನಾವಣಾ ಲಾಭ ಪಡೆಯಲು ಸಿಎಂ ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಇಲ್ಲಿವರೆಗೆ ವಿಷ್ಣು ಸ್ಮಾರಕದ ಬಗ್ಗೆ ಮಾತನಾಡದಿರುವುದು ಈಗ
ಮಾತನಾಡುತ್ತಿರುವುದೇಕೆ. ಚುನಾವಣಾ ಸಂದರ್ಭದಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಅನ್ನೋದನ್ನು ಜನರು ನೋಡ್ತಿದ್ದಾರೆ. ಮಂಡ್ಯದ ಸ್ವಾಭಿಮಾನ ಏನು ಅನ್ನೋದು ಏ.23ರಂದು ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದರು.