ಶಿವಮೊಗ್ಗ:ಕೊನೆ ಕ್ಷಣದಲ್ಲಿ ಮಧು ಪರ ದಿಗ್ಗಜರ ರಣತಂತ್ರ; ಸಿಎಂ ಸಭೆ ರದ್ದು
Team Udayavani, Apr 21, 2019, 11:10 AM IST
ಶಿವಮೊಗ್ಗ : ಬಿಜೆಪಿಯ ಹಾಲಿ ಸಂಸದ ಬಿ.ವೈ .ರಾಘವೇಂದ್ರ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಸ್ಪರ್ಧೆಯಿಂದ ಕಳೆಗಟ್ಟಿರುವ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಣಕಣ ಬಹಿರಂಗ ಪ್ರಚಾರದ ಕೊನೆ ದಿನವಾದ ಭಾನುವಾರ ರಂಗೇರಿದ್ದು, ದಿಗ್ಗಜ ನಾಯಕರು ಮತ ಬೇಟೆಯಲ್ಲಿ ನಿರತರಾಗಿದ್ದಾರೆ.
ಮಧು ಬಂಗಾರಪ್ಪ ಪರ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ 20 ಕ್ಕೂ ಹೆಚ್ಚು ಪ್ರಮುಖ ನಾಯಕರು, ಸಚಿವರು ಮತ ಯಾಚನೆಯಲ್ಲಿ ನಿರತರಾಗಿದ್ದಾರೆ.
ಬಹಿರಂಗ ಪ್ರಚಾರ ಸಭೆ ರದ್ದು
ಶಿವಮೊಗ್ಗ ಮತ್ತು ಭದ್ರವಾತಿಯಲ್ಲಿ ಇಂದು ನಡೆಯಬೇಕಾಗಿದ್ದ ಬಹಿರಂಗ ಪ್ರಚಾರ ಸಭೆಗಳನ್ನು ಸಿಎಂ ರದ್ದು ಮಾಡಿದ್ದು, ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಮಾತುಕತೆಗಳಲ್ಲಿ ಭಾಗಿಯಾಗಲಿದ್ದಾರೆ.
ಸಚಿವರು ದುಡ್ಡು ತುಂಬಿಕೊಂಡು ಬಂದಿದ್ದಾರೆ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಸಚಿವರು ಶಿವಮೊಗ್ಗಕ್ಕೆ ದುಡ್ಡು ತುಂಬಿಕೊಂಡು ಬಂದಿದ್ದಾರೆ.ಚುನಾವಣಾ ಆಯೋಗ ಈ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.
ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿದ್ದ 2.5 ಕೋಟಿ ರೂಪಾಯಿ ಜಪ್ತಿಯಾಗಿದೆ, ಬಾಗಲಕೋಟೆಯಲ್ಲೂ ಜಪ್ತಿಯಾಗಿದೆ ಎಂದರು.
ಹಣದ ಹೊಳೆ
ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಪರ ಹಣದ ಹೊಳೆ ಹರಿಸಲಾಗುತ್ತಿದೆ. ಶಿವಮೊಗ್ಗದ ಜನರು ಹಣಕ್ಕಾಗಿ ಮತ ಮಾರುವವರಲ್ಲ ಎಂದು ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.
ಬಿಜೆಪಿಗೆ ಕಾರ್ಯಕರ್ತರ ಬಲ
ಬಿಜೆಪಿ ಕ್ಷೇತ್ರವನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಪ್ರಚಾರ ನಡೆಸುತ್ತಿದ್ದು, ಕಾರ್ಯಕರ್ತರನ್ನು ನೆಚ್ಚಿಕೊಂಡಿದೆ.
ಈಶ್ವರಪ್ಪ ರಾಘವೇಂದ್ರ ಸೋಲಿಗೆ ಕಾಯುತ್ತಿದ್ದಾರೆ
ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಈಶ್ವರಪ್ಪ ಅವರು ರಾಘವೇಂದ್ರ ಅವರ ಸೋಲಿಗೆ ಕಾಯುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
2018 ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು 52,148 ಮತಗಳ ಅಂತರದಿಂದ ಸೋಲಿಸಿದ್ದರು.