ಶೋಭಾ ಸೇರಿ ಹಾಲಿ 14 ಸಂಸದರಿಗೆ ಟಿಕೆಟ್;7 ಕ್ಷೇತ್ರಗಳು ಇನ್ನೂ ಬಾಕಿ
Team Udayavani, Mar 21, 2019, 2:17 PM IST
ಹೊಸದಿಲ್ಲಿ: ಬಹುನಿರೀಕ್ಷಿತ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಸಂಜೆ ಹೊಸದಿಲ್ಲಿ ಯಲ್ಲಿ ಬಿಜೆಪಿ ಚುನಾವಣಾ ಸಮಿತಿಯ ಜೆ.ಪಿ.ನಡ್ಡಾ ಅವರು ಪ್ರಕಟಿಸಿದ್ದು, ಕರ್ನಾಟಕದ 21 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಕೊನೆಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಟಿಕೆಟ್ ಪಡೆದಿದ್ದಾರೆ.
ಕೊಪ್ಪಳ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಂಗಣ್ಣ ಕರಡಿ ಹೊರತು ಪಡಿಸಿ ಹಾಲಿ ಸಂಸದರೆಲ್ಲರಿಗೂ ಟಿಕೆಟ್ ನೀಡಲಾಗಿದೆ.
ಬಳ್ಳಾರಿಯಿಂದ ದೇವೇಂದ್ರಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ತುಮಕೂರಿನ ಟಿಕೆಟ್ ಬಸವರಾಜ್ ಅವರಿಗೆ ನೀಡಲಾಗಿದೆ. ಚಿತ್ರದುರ್ಗದಿಂದ ಎ.ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಚಿಕ್ಕೋಡಿ, ರಾಯಚೂರು ,ಕೋಲಾರ, ಮಂಡ್ಯ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಮತ್ತು ಕೊಪ್ಪಳ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.
ಬೆಳಗಾವಿ ಹಾಲಿ ಸಂಸದ ಸುರೇಶ್ ಅಂಗಡಿ, ಬಾಗಲಕೋಟೆ ಹಾಲಿ ಸಂಸದ ಗದ್ದಿಗೌಡರ್ , ವಿಜಯಪುರ ಹಾಲಿ ಸಂಸದ, ಸಚಿವ ರಮೇಶ್ ಜಿಗಜಿಣಗಿ, ಬೀದರ್ ಹಾಲಿ ಸಂಸದ ಭಗವಂತ್ ಖೂಬಾ, ಹಾವೇರಿ ಹಾಲಿ ಸಂಸದ ಶಿವಕುಮಾರ್ ಉದಾಸಿ, ಉತ್ತರ ಕನ್ನಡ ಹಾಲಿ ಸಂಸದ, ಸಚಿವ ಅನಂತ್ ಕುಮಾರ್ ಹೆಗಡೆ, ಶಿವಮೊಗ್ಗ ಹಾಲಿ ಸಂಸದ ಬಿ.ವೈ .ರಾಘವೇಂದ್ರ, ದಾವಣಗೆರೆ ಹಾಲಿ ಸಂಸದ ಸಿದ್ದೇಶ್ವರ್ , ಮೈಸೂರು-ಕೊಡಗು ಕ್ಷೇತ್ರಕ್ಕೆ ಹಾಲಿ ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಉತ್ತರ ಹಾಲಿ ಸಂಸದ , ಸಚಿವ ಡಿ.ವಿ.ಸದಾನಂದ ಗೌಡ, ಬೆಂಗಳೂರು ಕೇಂದ್ರ ಹಾಲಿ ಸಂಸದ ಪಿ.ಸಿ.ಮೋಹನ್, ಧಾರವಾಡ ಹಾಲಿ ಸಂಸದ ಪ್ರಹ್ಲಾದ್ ಜೋಷಿ ಅವರು ಟಿಕೆಟ್ ಪಡೆದಿದ್ದಾರೆ.
ಹಾಸನಕ್ಕೆ ಕಾಂಗ್ರೆಸ್ನಿಂದ ಬಂದಿರುವ ಎ.ಮಂಜು ಅವರು ನಿರೀಕ್ಷೆಯಂತೆ ಟಿಕೆಟ್ ಪಡೆದಿದ್ದಾರೆ. ಕಲಬುರಗಿ –ಡಾ ಉಮೇಶ್ ಜಾಧವ್, ಚಿಕ್ಕಬಳ್ಳಾಪುರ – ಬಿ.ಎನ್.ಬಚ್ಚೇಗಡ, ಚಾಮರಾಜನಗರ ಕ್ಷೇತ್ರದಿಂದ ವಿ.ಶ್ರೀನಿವಾಸ್ ಪ್ರಸಾದ್, ಚಿತ್ರದುರ್ಗ ಕ್ಷೇತ್ರದಿಂದ ನಾರಾಯಣ ಸ್ವಾಮಿ ಅವರು ಟಿಕೆಟ್ ಪಡೆದಿದ್ದಾರೆ.