ಥಾಣೆ ಮತದಾರರ ಜಾಗೃತಿಗೆ ಚಿರತೆ ವೇಷ
Team Udayavani, Apr 19, 2019, 5:19 AM IST
ಸಾಂದರ್ಭಿಕ ಚಿತ್ರ
ನಗರವಾಸಿಗಳು ಓಟು ಹಾಕಲು ಹೋಗುವುದೇ ಕಡಿಮೆ ಎನ್ನುವುದು ಹಿಂದಿನಿಂದಲೂ ಇರುವ ಆರೋಪ. ಥಾಣೆಯೂ ಇದಕ್ಕೆ ಹೊರತೇನಿಲ್ಲ. ಈ ಭಾಗದಲ್ಲೂ ಅಬ್ಬಬ್ಟಾ ಎಂದರೆ ಶೇಕಡಾವಾರು ಮತದಾನ ಶೇ.50 ದಾಟಿದರೆ ಕಷ್ಟ ಎಂಬಂತಿದೆ ಪರಿಸ್ಥಿತಿ. ಆದರೆ ಈ ಬಾರಿ ಇದನ್ನು ಬದಲಾಯಿಸುತ್ತೇವೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪಣತೊಟ್ಟಿದ್ದಾರೆ. ಇದಕಾಗಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದೊಡ್ಡದಾದ ಚಿರತೆ ಗೊಂಬೆ ವೇಷದೊಂದಿಗೆ ಇಡೀ ಥಾಣೆ ತಿರುಗುತ್ತಿದ್ದಾರೆ. “ಓಟ್ ಥಾಣೆ ಓಟ್’ ಘೋಷವಾಕ್ಯದಡಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಅಖಾಡಕ್ಕಿಳಿದ ರಾಜ್ಘಾಟ್ ಚೌಕಿದಾರ್
ಈ ಬಾರಿ ಚುನಾವಣೆಯಲ್ಲಿ ಚೌಕಿದಾರ್ ಹೆಸರು ಎಲ್ಲೆಡೆ ಸದ್ದುಮಾಡುತ್ತಿದ್ದರೆ, ಇಲ್ಲೊಬ್ಬರು ಚೌಕಿದಾರ್ ನೇರವಾಗಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಇವರು ಸಾಮಾನ್ಯ ಚೌಕಿದಾರ್ ಅಲ್ಲ. ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳವಿರುವ ರಾಜ್ಘಾಟ್ನ ಚೌಕಿದಾರ್ ಆಗಿದ್ದವರು. ಜತೆಗೆ ಸುಮಾರು 20 ವರ್ಷ ಸೇನೆಯಲ್ಲೂ ಸೇವೆ ಸಲ್ಲಿರುವವರು.