ಕಾಂಗ್ರೆಸ್-ಜೆಡಿಎಸ್ದು ಸ್ವಾರ್ಥ ಮೈತ್ರಿ
Team Udayavani, Apr 3, 2019, 6:00 AM IST
ಯಾವುದೇ ಸಿದ್ಧಾಂತ, ಬದ್ಧತೆಯಿಲ್ಲದೆ ಕೇವಲ ಸ್ವಾರ್ಥಕ್ಕಾಗಿ ಕಾಂಗ್ರೆಸ್, ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದು, 10 ತಿಂಗಳ ಆಡಳಿತವನ್ನು ಒಳಜಗಳ, ಕಿತ್ತಾಟದಲ್ಲೇ ಕಳೆದಿವೆ. ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಪಡೆದಿದ್ದರೂ ಪ್ರತಿಪಕ್ಷದಲ್ಲಿರುವ ಬಿಜೆಪಿ ಬಗ್ಗೆ ಜನರಿಗೆ ಒಲವಿದೆ. ರಾಜ್ಯದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ರಾಜ್ಯ ಬಿಜೆಪಿ ಲೋಕಸಭಾ ಚುನಾವಣಾ ಸಹ ಪ್ರಭಾರಿ ಕಿರಣ್ ಮಹೇಶ್ವರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಲೋಕಸಭಾ ಚುನಾವಣಾ ಸಹ ಪ್ರಭಾರಿಯಾಗಿ ರಾಜ್ಯದ ಬಹುತೇಕ ಕ್ಷೇತ್ರದಲ್ಲಿ ಪ್ರವಾಸ ನಡೆಸಿರುವ ಕಿರಣ್ ಮಹೇಶ್ವರಿಯವರು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕುರಿತಂತೆ “ಉದಯವಾಣಿ’ಗೆ ಸಂದರ್ಶನ ನೀಡಿದ್ದಾರೆ. ವಿವರ ಹೀಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸ್ಥಿತಿಗತಿ ಹೇಗಿದೆ?
ಸದ್ಯ ರಾಜ್ಯದಲ್ಲಿನ ರಾಜಕೀಯ ಸ್ಥಿತಿ ಬಿಜೆಪಿಗೆ ಪೂರಕ ವಾತಾವರಣವಿದೆ. 10 ತಿಂಗಳಾದರೂ ಸಮ್ಮಿಶ್ರ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ಒಳಜಗಳ, ಅಧಿಕಾರ ಹಂಚಿಕೆಯಲ್ಲೇ ಕಾಲ ಕಳೆದಿದೆ. ವಿಧಾನಸಭೆಯಲ್ಲಿ ಹೆಚ್ಚು ಸ್ಥಾನವಿದ್ದರೂ ಬಹುಮತಕ್ಕೆ ಅಗತ್ಯ ಸಂಖ್ಯೆ ಕೊರತೆ ಕಾರಣಕ್ಕೆ ಬಿಜೆಪಿಗೆ ಸರ್ಕಾರ ರಚನೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಜನರಿಗೆ ಬಿಜೆಪಿ ಬಗ್ಗೆ ಮೃದು ಧೋರಣೆ ಇದೆ.
ದೇಶಾದ್ಯಂತ ಮತ್ತೆ ಮೋದಿ ಅಲೆ ಇದೆ ಎಂಬುದು ನಿಜವಾದರೆ ಕಾರಣವಾಗಬಹುದಾದ ಅಂಶಗಳೇನು?
ದೇಶದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಪೂರಕವಾಗಿ 350ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಧಾನಿ ಮೋದಿಯವರ ಸರ್ಕಾರ ಜಾರಿಗೊಳಿಸಿದೆ. ಸುಧಾರಿತ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮೂಲಕ ಸಮಾಜದ ಕೊನೆಯ ವರ್ಗದ ಜನರೊಂದಿಗೂ ಸಂಪರ್ಕವಿಟ್ಟುಕೊಂಡು ಸಂವಹನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾನ್ಯ ಕುಟುಂಬದಿಂದ
ಬಂದವರಾಗಿರುವುದರಿಂದ ಸಾಮಾನ್ಯರ ಸಮಸ್ಯೆ, ನೋವು, ನಿರೀಕ್ಷೆಗಳ ಅರಿವಿದೆ. ಹಾಗಾಗಿ ಮೋದಿ ಅಲೆ ಈ ಬಾರಿಯೂ ಇದೆ.
ರಾಜ್ಯದಲ್ಲಿ ಮೂವರು ಮಹಿಳೆಯರಿಗೆ ಟಿಕೆಟ್ ನೀಡುವ ಆಶಯವನ್ನು ರಾಜ್ಯಾಧ್ಯಕ್ಷರು ವ್ಯಕ್ತಪಡಿಸಿದ್ದರೂ ಒಬ್ಬರಿಗಷ್ಟೇ ಸ್ಪರ್ಧೆಗೆ ಅವಕಾಶ ನೀಡಿರುವುದಕ್ಕೆ ಏನು ಹೇಳಿವಿರಿ?
ಪಕ್ಷದ ಸಂವಿಧಾನದಂತೆ ಪಕ್ಷದ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಿದೆ. ಬೂತ್ ಸಮಿತಿಯಿಂದ ರಾಷ್ಟ್ರೀಯ ಸಮಿತಿವರೆಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಪಕ್ಷದ ಸಂಸದೀಯ ಮಂಡಳಿಯಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗಿದ್ದು, ಪ್ರಮುಖ ನಿರ್ಧಾರ ಕೈಗೊಳ್ಳುವ ಅವರನ್ನೂ ಪಾಲುದಾರರನ್ನಾಗಿ ಮಾಡಿದೆ.
ರಾಜ್ಯದಲ್ಲಿ ಚುನಾವಣೆಯಲ್ಲಿ ಜಾತಿಯೂ ಪ್ರಮುಖ ಪಾತ್ರ ವಹಿಸುವುದರಿಂದ ಬಿಜೆಪಿ ಇದನ್ನು ಹೇಗೆ ಸ್ವೀಕರಿಸಲಿದೆ?
ಬಿಜೆಪಿ ಜಾತಿ ಆಧಾರಿತ ಚುನಾವಣೆ ಎದುರಿಸುವುದಿಲ್ಲ. ಜಾತಿಯಿಂದ ಕೆಲವರು ನಾಯಕರಾಗಬಹುದೇ ಹೊರತು ಅಭಿವೃದ್ಧಿ ಕಷ್ಟ. ಈ ಹಿಂದೆ ಈಶಾನ್ಯ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಪಂದನೆ ಇರಲಿಲ್ಲ. ಈಗ ಪಕ್ಷವು ಆ ಭಾಗಗಳಲ್ಲೂ ಉತ್ತಮವಾಗಿ ನೆಲೆಯೂರಿದೆ.
ತೇಜಸ್ವಿನಿ ಅನಂತ ಕುಮಾರ್ ಅವರ ಅಸಮಾಧಾನದ ಬಗ್ಗೆ ಏನು ಹೇಳುವಿರಿ?
ತೇಜಸ್ವಿನಿ ಅನಂತ ಕುಮಾರ್ ಅವರು ಪಕ್ಷದ ಉತ್ತಮ ಕಾರ್ಯಕರ್ತರು. ವರಿಷ್ಠರ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಅವರು ಪ್ರಚಾರದಲ್ಲಿ ಪಾಲ್ಗೊಂಡು ಸಕ್ರಿಯವಾಗಿ ತೊಡಗಿಸಿಕೊಳ್ಳುವ ವಿಶ್ವಾಸವಿದೆ.
ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಆರೋಪಗಳ ಬಗ್ಗೆ ಏನು ಹೇಳುವಿರಿ?
ಚುನಾವಣಾ ಸಂದರ್ಭದಲ್ಲಿ ಇಂತಹ ಆರೋಪಗಳು ಸಹಜ. ಇದೆಲ್ಲಾ ರಾಜಕೀಯ ಸ್ಟಂಟ್ ಅಷ್ಟೇ.
ಬಿಜೆಪಿಯಲ್ಲೂ ಹೈಕಮಾಂಡ್ ಸಂಸ್ಕೃತಿ ಕಾಣುತ್ತಿದೆ ಎಂಬ ಆರೋಪವಿದೆ ?
ಅಭ್ಯರ್ಥಿ ಆಯ್ಕೆ ಸೇರಿ ಯಾವ ನಿರ್ಧಾರವನ್ನೂ ಪಕ್ಷದಲ್ಲಿ ಏಕಪಕ್ಷೀಯವಾಗಿ ತೆಗೆದುಕೊ ಳ್ಳುವುದಿಲ್ಲ. ಎಲ್ಲರೂ ಒಟ್ಟಿಗೆ ಚರ್ಚಿಸಿ ಪ್ರಜಾಸತ್ತಾತ್ಮಕ ರೀತಿಯಲ್ಲೇ ನಿರ್ಧಾರಗ ಳಾಗುತ್ತವೆ.
ಕರ್ನಾಟಕವನ್ನು ಬಿಜೆಪಿ ಮುಕ್ತಗೊಳಿಸುವ ಹೇಳಿಕೆಗೆ ನಿಮ್ಮ ಪ್ರತಿಕ್ರಿಯೆ ಏನು?
ಜೆಡಿಎಸ್ ಪೂರ್ಣ ಶ್ರಮ ವಹಿಸಿ ಗೆದ್ದಿರುವುದು 37 ಸ್ಥಾನ. ಆ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ನಾಯಕರೇ ಇಲ್ಲ. ಕಾಂಗ್ರೆಸ್ನ ಸ್ಥಿತಿಯೂ ಭಿನ್ನವಾಗಿಲ್ಲ. ಹಾಗಾಗಿ ಅವರು ಕನಸು ಕಾಣಲಿ. ಎರಡೂ ಪಕ್ಷಗಳು ಪರಸ್ಪರ ಒಳಜಗಳಗಳಿಂದಾಗಿ ರಾಜ್ಯದಿಂದ ಮುಕ್ತವಾದರೆ ಆಶ್ಚರ್ಯವಿಲ್ಲ.
ಕುಟುಂಬ ರಾಜಕಾರಣವನ್ನು ಬಿಜೆಪಿ ಉತ್ತೇಜಿಸುತ್ತಿದೆಯೇ?
ಬಿಜೆಪಿಯು ಕುಟುಂಬ ರಾಜಕಾರಣಕ್ಕೆ ಉತ್ತೇಜನ ನೀಡುವುದಿಲ್ಲ. ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ರಾಜಕೀಯ ಹಿನ್ನೆಲೆ ಇಲ್ಲ. ಕೇವಲ ಗೆಲ್ಲುವ ಸಾಧ್ಯತೆ ಆಧರಿಸಿ ಟಿಕೆಟ್ ನೀಡಲಾಗಿದೆಯೇ ಹೊರತು ಕುಟುಂಬ ರಾಜಕಾರಣ ಕಾರಣಕ್ಕಾಗಿ ಅಲ್ಲ.
ಸಂದರ್ಶನ: ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ