“ಪಾಕಿಸ್ತಾನ ವಿಜಯೋತ್ಸವ ಆಚರಿಸಬೇಕೆಂದರೆ ಕೈ ಗೆಲ್ಲಿಸಿ’
Team Udayavani, Apr 18, 2019, 3:00 AM IST
ಐನಾಪುರ: “ಮೇ 23ರಂದು ದೇಶದೆಲ್ಲೆಡೆ ವಿಜಯೋತ್ಸವ ಆಚರಿಸಬೇಕೆಂದರೆ ಬಿಜೆಪಿಗೆ ಮತ ಹಾಕಿ; ಪಾಕಿಸ್ತಾನದಲ್ಲಿ ವಿಜಯೋತ್ಸವ ಆಚರಿಸಬೇಕೆಂದರೆ ಕಾಂಗ್ರೆಸ್ಗೆ ಮತ ಹಾಕಿ’ ಎಂದು ಮಾಜಿ ಶಾಸಕ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ ಬಹಿರಂಗ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,”ಈ ಲೋಕಸಭೆ ಚುನಾವಣೆ ಬಿಜೆಪಿ- ಕಾಂಗ್ರೆಸ್ ಮಧ್ಯದ ಚುನಾವಣೆಯಲ್ಲ. ದೇಶಭಕ್ತರು ಹಾಗೂ ದೇಶದ್ರೋಹಿಗಳ ನಡುವಿನ ಮಹಾಯುದ್ಧ.
ಅದಕ್ಕಾಗಿ ದೇಶದ್ರೋಹಿಗಳನ್ನು ಅಧಿ ಕಾರದಿಂದ ಕಿತ್ತೂಗೆಯಲು ನರೇಂದ್ರ ಮೋದಿಯವರನ್ನು ಬೆಂಬಲಿಸಿ’ ಎಂದರು. ಕುಮಾರಸ್ವಾಮಿ, ದೇವೇಗೌಡರ ವಿರುದ್ಧವೂ ಹರಿಹಾಯ್ದ ಸಂಜಯ ಪಾಟೀಲ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದೆಂದು ಸಂವಿಧಾನದಲ್ಲಿದೆ.
ಆದರೆ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ನಿಖಿಲ್ ವಿರುದ್ಧ ಸ್ಪರ್ಧಿಸಿದರೆ ಅವಳು ಗೌಡತಿ ಅಲ್ಲ, ಅವಳು ನಾಯ್ಡು ಎಂಬುದಾಗಿ ಟೀಕಿಸುತ್ತಿದ್ದಾರೆ ಎಂದರಲ್ಲದೆ, ಕುಮಾರಸ್ವಾಮಿಯವರು ತನ್ನ ಮಗ ಸೋತರೆ ಮುಖ್ಯಮಂತ್ರಿ ಕುರ್ಚಿ ಹೋಗುತ್ತದೆ ಎಂಬ ಭಯದಿಂದ ಒಬ್ಬ ಹೆಣ್ಣು ಮಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.