“ತುಮಕೂರಲ್ಲಿ ದೇವೇಗೌಡರ ಸೋಲು ಖಚಿತ’
Team Udayavani, Apr 5, 2019, 6:27 AM IST
ಬಾಗಲಕೋಟೆ/ದಾವಣಗೆರೆ: ಮಾಜಿ ಪ್ರಧಾನಿ ದೇವೇಗೌಡ ಅವರು ತುಮಕೂರು ಕ್ಷೇತ್ರದಲ್ಲಿ ಸೋಲುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎನ್ನುವ ಆಕ್ರೋಶ ಕಂಡು ಬರುತ್ತಿದೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಉತ್ತಮ ಅನುಕೂಲವಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎಂದು ಹೇಳಿದರು.
ಕಮೀಷನ್ ಏಜೆಂಟ್ ಸರ್ಕಾರ: ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಪರ ಗುರುವಾರ ಮೆರವಣಿಗೆ, ಪ್ರಚಾರ ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, “ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಿ, ಎಷ್ಟು ಸಿಕ್ಕಿತು ಎಂದು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಹಾಸನದಲ್ಲಿ 5 ಕಾಮಗಾರಿ ಮುಗಿಯುವ ಮುನ್ನವೇ 1,334 ಕೋಟಿ ರೂ. ಪಾವತಿಸಿ ಸಿಕ್ಕಿ ಬಿದ್ದಿದ್ದಾರೆ. ಕಾಮಗಾರಿ ಮುಗಿಯುವ ಮುನ್ನವೇ ಹಣ ಪಾವತಿಸಿರುವುದು ಚುನಾವಣೆಯಲ್ಲಿ ಬಳಸುವ ಷಡ್ಯಂತ್ರಕ್ಕೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸರ್ಕಾರ 10 ಪಸೆಟ್ ಅಲ್ಲ, 20 ಪರ್ಸೆಂಟ್ ಕಮೀಷನ್ ಏಜೆಂಟ್ ಸರ್ಕಾರ ಎಂಬುದು ಸಾಬೀತಾಗಿದೆ’ ಎಂದರು.