ಸಿಎಂಗೆ “ಕೈ’ಪೆಟ್ಟು,”ಕೈ’ಗಾಗಿ ರೇವಣ್ಣ ಪಟ್ಟು
Team Udayavani, Mar 22, 2019, 2:40 AM IST
ಸ್ವಾಭಿಮಾನ ಬಿಟ್ಟು ಬೆಂಬಲದ ಭಿಕ್ಷೆ ಬೇಡಲಾರೆ: ಎಚ್ಡಿಕೆ
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಬೆಂಬಲಿಸಲು ನಿರಾಕರಿಸುತ್ತಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, “ಅವರು ಬಹಳ ಮುಂದೆ ಹೋಗಿದ್ದಾರೆ. ನಾನು ಸ್ವಾಭಿಮಾನ ಬಿಟ್ಟು ಭಿಕ್ಷೆ ಬೇಡುವುದಿಲ್ಲ. ಬೆನ್ನಿಗೆ ಚೂರಿ ಹಾಕುವವರು ನನಗೆ ಬೇಕಾಗಿಲ್ಲ. ಮೂಲ ಕಾಂಗ್ರೆಸ್ಸಿಗರು ನಿಖಿಲ್ಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಜತೆಗಿದ್ದಾರೆ. ಅಷ್ಟೆ ಸಾಕು ನಮಗೆ’ ಎಂದು ಕಿಡಿ ಕಾರಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಮಾಜಿ ಸಚಿವ ಚೆಲುವರಾಯಸ್ವಾಮಿ ಹಾಗೂ ತಂಡದ ವಿರುದಟಛಿ ಪರೋಕ್ಷ ವಾಗಾಟಛಿಳಿ ನಡೆಸಿದರು. “ಕೆಲ ಕಾಂಗ್ರೆಸ್ಸಿಗರು ತುಂಬಾ ಮುಂದೆ ಹೋಗಿದ್ದಾರೆ. ನಾನು ಸ್ವಾಭಿಮಾನ ಕಳೆದುಕೊಂಡು ಅಂಥವರ ಮುಂದೆ ಹೋಗಿ ಭಿಕ್ಷೆ ಬೇಡಲ್ಲ. ನನಗೆ ನನ್ನ ಕಾರ್ಯಕರ್ತರೇ ಸಾಕು. ಅವರೇ ಸಮರ್ಥರಿದ್ದಾರೆ’ ಎಂದರು. “ದೇವೇಗೌಡರು ಇನ್ನೂ ಚುನಾವಣೆಗೆ ನಿಲ್ಲುವ ತೀರ್ಮಾನ ಮಾಡಿಲ್ಲ. ಹಾಸನದಲ್ಲಿ ನಿಲ್ಲಬೇಕು ಎಂದು ರೇವಣ್ಣ, ಪ್ರಜ್ವಲ್ ಒತ್ತಾಯಿಸಿದ್ದರು. ಆದರೆ, ಮೂರು ವರ್ಷದ ಹಿಂದೆಯೇ ಪ್ರಜ್ವಲ್ಗೆ ಸೀಟು ಎಂದು ದೇವೇಗೌಡರು ಹೇಳಿದ್ದರು. ಹೀಗಾಗಿ, ಅಲ್ಲಿನ ಸ್ಪರ್ಧೆ ಪ್ರಸ್ತಾಪ ಇಲ್ಲ ಎಂದರು.
5 ಲಕ್ಷ ಜನರನ್ನು ಸೇರಿಸುತ್ತೇನೆ
ಮಾರ್ಚ್ 31ಕ್ಕೆ ಬೃಹತ್ ಸಮಾವೇಶ ಮಾಡಲಾಗುವುದು. ಐದು ಲಕ್ಷ ಜನ ಭಾಗವಹಿಸಲಿದ್ದಾರೆ. ನೆಲಮಂಗಲ ರಸ್ತೆ ಅಥವಾ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇವೆ. ಅಲ್ಲಿಂದಲೇ ಚುನಾವಣಾ ಪ್ರಚಾರ ಪ್ರಾರಂಭ ವಾಗಲಿದೆ. ರಾಹುಲ್ಗಾಂಧಿಯವರಿಗೆ ಹೆಚ್ಚು ಕಡೆ ಪ್ರಚಾರ ಮಾಡಲು ಆಗದು, ದೇಶಾದ್ಯಂತ ಚುನಾವಣೆ ಇರುತ್ತದೆ. ಹೀಗಾಗಿ, ಸಾಂಕೇತಿಕವಾಗಿ ಜಂಟಿ ರ್ಯಾಲಿ ಮಾಡುತ್ತೇವೆ.
● ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
25ಕ್ಕೆ ನಮ್ಮ ತಾಕತ್ತು ನೋಡಿ: ನಿಖಿಲ್
ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿ ಗುರುವಾರ ಸಾಂಕೇತಿಕವಾಗಿ ಸಲ್ಲಿಸಬೇಕಿದ್ದ ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ದಿಢೀರ್ ರದ್ದುಗೊಂಡಿದೆ.
ನಾಮಪತ್ರ ಸಲ್ಲಿಸಲು ಹುಣ್ಣಿಮೆಯ ದಿನವಾದ ಗುರುವಾರ ಶುಭದಿನ ಎನ್ನುವ ಕಾರಣಕ್ಕೆ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ, ಸಿಎಂ ಕುಮಾರಸ್ವಾಮಿ ಅವರ ನಿರ್ದೇಶನದಂತೆ ಒಂದೇ ಬಾರಿಗೆ ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮಾತನಾಡಿ, “ನಾನು ನಾಮಪತ್ರ ಸಲ್ಲಿಸುವ ದಿನ ನಮ್ಮ ಶಕ್ತಿ ಪ್ರದರ್ಶನ ಹೇಗಿರುತ್ತೆ ಅನ್ನೋದನ್ನು ನಾನು ಹೇಳುವುದಿಲ್ಲ. ಅದನ್ನು ನೀವೇ ನೋಡಿ’ ಎಂದರು. “ಜನರನ್ನು ಸೇರಿಸೋದು ದೊಡ್ಡ ವಿಷಯವೇನಲ್ಲ.ನಾನು ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಬೇ ಕಿತ್ತು. ಕಾರಣಾಂತರಗಳಿಂದ ಕಾರ್ಯಕ್ರಮವನ್ನು ಮುಂದೂ ಡಲಾಗಿದೆ. ಮಾ.25ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸ ಲಿದ್ದು, ಅದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ’ ಎಂದರು
ಮಂಡ್ಯ ಬಿಕ್ಕಟ್ಟು; ಸಚಿವ ಡಿಕೆಶಿಗೆ ಇಕ್ಕಟ್ಟು
ಬೆಂಗಳೂರು: ಮಂಡ್ಯದಲ್ಲಿ ಪಕ್ಷ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಪಕ್ಷವೇ ಇಲ್ಲದಿದ್ದರೆ ನಾವು ಮುಂದೆ ಚುನಾವಣೆ ಎದುರಿಸುವುದಾದರೂ ಹೇಗೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರು ಸಂಧಾನ ಕೆಲಸ ಮಾಡುತ್ತಿರುವ ಸಚಿವ ಡಿ.ಕೆ.ಶಿವಕುಮಾರ್ಗೆ ನೇರವಾಗಿಯೇ ಕೇಳಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರುಬಹಿರಂಗವಾಗಿಯೇಕಾಣಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಅದನ್ನು ತಡೆಯಲು ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರ ಮನವೊಲಿಕೆ ಪ್ರಯತ್ನ ಮುಂದುವರಿಸಿದ್ದಾರೆ. ಬುಧವಾರ ತಡರಾತ್ರಿವರೆಗೂ ಮಂಡ್ಯ ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಆ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಹಾಜರಾಗದೆ ಅಂತರ ಕಾಯ್ದುಕೊಂಡಿದ್ದರು.
ರೇವಣ್ಣ ಜೊತೆ ಹಾಸನ “ಕೈ’ ಮುಖಂಡರ ಸಭೆ ಇಂದು
ಬೆಂಗಳೂರು: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪರ ಚುನಾವಣೆಯಲ್ಲಿ ಕೆಲಸ ಮಾಡಲು ನಿರಾಕರಿಸುತ್ತಿರುವ ಕಾಂಗ್ರೆಸ್ನ ಜಿಲ್ಲಾ ಮುಖಂಡರ ಜೊತೆಗೆ ಎಚ್.ಡಿ.ರೇವಣ್ಣ ಅವರು ನಡೆಸಲು ಉದ್ದೇಶಿಸಿದ್ದ ಮುಖಾಮುಖೀ ಸಂಧಾನ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.
ಬುಧವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಾಸನ ಜಿಲ್ಲಾ ಮುಖಂಡರು ಜಿಲ್ಲೆ ಯಲ್ಲಿ ತಮಗಿರುವ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಸಮ್ಮುಖದಲ್ಲಿ ಬಗೆಹರಿಸುವಂತೆ ಮನವಿ ಮಾಡಿ ದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸಿದ್ದರಾಮಯ್ಯನವರು ಎಚ್.ಡಿ.ರೇವಣ್ಣ ಅವರೊಂದಿಗೆ ಹಾಸನ ಜಿಲ್ಲಾ ಮುಖಂಡರ ಜೊತೆ ಮುಖಾಮುಖೀಯಾಗಿ ಸಂಧಾನ ಸಭೆ ನಡೆಸಿ, ಗೊಂದಲ ನಿವಾರಣೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರಿಂದ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.
ಆದರೆ, ಶುಕ್ರವಾರ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಆ ಸಂದರ್ಭದಲ್ಲಿ ಕಾಂಗ್ರೆಸ್ನ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಗೋಪಾಲ ಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿರುವಂತೆ ಸಿದ್ದರಾಮಯ್ಯ ಅವರು ಹೇಳಿದ್ದಾರೆ.ನಾವೆಲ್ಲರೂ ಭಾಗಿಯಾಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ, ಮಾತನಾಡಿದ ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡ ಎಚ್.ಕೆ.ಮಹೇಶ್, ಎ.ಮಂಜು ಅವರು ಬಿಜೆಪಿಗೆ ಹೋಗಿದ್ದಾರೆ. ಅವರ ಪುತ್ರ ಮಂಥರ್ಗೌಡ ಕಾಂಗ್ರೆಸ್ನಲ್ಲಿಯೇ ಇರುವುದಾಗಿ ಹೇಳಿದ್ದಾರೆ. ಪ್ರಜ್ವಲ್ ನಾಮಪತ್ರ ಸಲ್ಲಿಸುವ ವೇಳೆ ಅವರು ಬಾರದಿದ್ದರೆ, ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದರು.