“ಬಿಜೆಪಿ ಎರಡು ಡಿಜಿಟ್ ಏರಲೂ ಬಿಡಲ್ಲ ‘
Team Udayavani, Mar 20, 2019, 1:15 AM IST
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಜತೆಗೂಡಿದ್ದು, ಬಿಜೆಪಿ ಸಂಸದರ ಸಂಖ್ಯಾಬಲ ಎರಡು ಡಿಜಿಟ್ ತಲುಪದಂತೆ ನೋಡಿಕೊಳ್ಳುತ್ತೇವೆ ಎಂದು ದೇವೇಗೌಡರು ಗುಡುಗಿದ್ದಾರೆ. ನಾನು, ಸಿದ್ದರಾಮಯ್ಯ ಜತೆಗೂಡಿದ್ದೇವೆ ಎಂದ ಮೇಲೆ ಸಂಶಯ ಬೇಡ. ನಾವು ಹೇಳುತ್ತಿರು ವುದನ್ನು ಮಾಡಿ ತೋರಿಸುತ್ತೇವೆ ಎಂದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾ ಘಟಬಂಧನ್ ಬಗ್ಗೆ ಪ್ರಧಾನಿ ಮೋದಿ ಲಘುವಾಗಿ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿ 15 ರಾಜ್ಯಗಳಲ್ಲಿ ಘಟಬಂಧನ್ ಸರಕಾರವನ್ನೇ ನಡೆಸುತ್ತಿದೆ ಎಂಬುದನ್ನು ಮರೆತಿದ್ದಾರೆ ಎಂದು ಟಾಂಗ್ ನೀಡಿದರು.
ಗೌಡರು ತುಮಕೂರಿನಿಂದ: ಅನಿತಾ
ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಾರೆ ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ. ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದರು.
“ನನ್ನ ಬಗ್ಗೆ ತೀರ್ಮಾನಿಸುವ
ಸ್ವಾತಂತ್ರ್ಯ ನನಗಿಲ್ಲವೇನ್ರಿ?’
ಬೆಂಗಳೂರು: ನಾನು ಎಲ್ಲಿ ಸ್ಪರ್ಧೆ ಮಾಡಲಿದ್ದೇನೆ, ಸ್ಪರ್ಧಿಸ ಬೇಕೇ- ಬೇಡವೇ ಎಂಬುದರ ಬಗ್ಗೆ ತೀರ್ಮಾನಿಸುವ ಕನಿಷ್ಠ ಸ್ವಾತಂತ್ರ್ಯ ನನಗೆ ಇದೆ. ದಿಲ್ಲಿಯಲ್ಲಿ ನನ್ನ ಅಗತ್ಯ ಎಷ್ಟಿದೆ ಎಂಬುದರ ಬಗ್ಗೆಯೂ ಯೋಚಿಸುತ್ತಿದ್ದೇನೆ ಎಂದು ದೇವೇಗೌಡ ಪ್ರತಿಪಾದಿಸಿದರು.
ನನ್ನ ಸ್ಪರ್ಧೆ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಣಯ ತಿಳಿಸಲಿದ್ದೇನೆ. ಅಲ್ಲಿಯ ವರೆಗೂ ನಿಮ್ಮೆಲ್ಲ ಊಹಾಪೋಹಗಳಿಗೆ ವಿರಾಮ ಹಾಕಿ. ರಾಹುಲ್ ನಾಯಕತ್ವಕ್ಕೆ ಜತೆಗೂಡಿ ರಾಷ್ಟ್ರ ಮಟ್ಟದಲ್ಲಿ ನನ್ನಿಂದ ಏನಾದರೂ ಕಿಂಚಿತ್ ಸಹಾಯ ಮಾಡುತ್ತೇನೆ. ಲೋಕಸಭಾ ಚುನಾವಣೆ ಅನಂತರವೂ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸುಸೂತ್ರವಾಗಿ ನಡೆಯಲಿದೆ ಎಂದರು. ಹಾಸನದಿಂದ ಸ್ಪರ್ಧೆ ಕುರಿತ ಪ್ರಶ್ನೆಗೆ, 3 ವರ್ಷದ ಹಿಂದೆಯೇ ನಾನು ಸ್ಪಷ್ಟಪಡಿಸಿದ್ದೆ. ನಾನು ಸಂಸತ್ಗೆ ಹೋಗುವುದಿಲ್ಲ. ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿ ಎಂದು ಹೇಳಿದ್ದೆ ಎಂದರು.
ಜಯಪ್ರಕಾಶ್ ಹೆಗ್ಡೆ ಹೆಸರೂ ಇದೆ
ಸೀಟು ಹಂಚಿಕೆಯಲ್ಲಿ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ, ಅಂತಹ ದೊಡ್ಡ ಬದಲಾವಣೆ ಏನೂ ಇಲ್ಲ ಎಂದರು. ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟು ಕೊಡಲಾಗುವುದು ಎಂಬ ಮಾತುಗಳು ಇರುವ ಬಗ್ಗೆ, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾರಾ ಎಂದಾಗ, ನಾವು ಅದನ್ನು ಅನೌನ್ಸ್ ಮಾಡಿದ್ದೀವಾ, ಅವರ ಹೆಸರು ಇದೆ, ಜಯಪ್ರಕಾಶ್ ಹೆಗ್ಡೆ ಹೆಸರೂ ಇದೆ, ಆರತಿ ಕೃಷ್ಣ ಅವರ ಹೆಸರೂ ಕೇಳಿ ಬರುತ್ತಿದೆಯಲ್ಲವೇ, ನೋಡೋಣ ಎಂದರು.
“ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ?’
ಹಾಸನ: ದೇವೇಗೌಡರು ಮಾತ್ರ ಕುಟುಂಬ ರಾಜ ಕಾರಣ ಮಾಡುತ್ತಿದ್ದಾರಾ? ಬೇರೆ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಮಾಧ್ಯಮಗಳು ಬೇರೆಯವರ ಕುಟುಂಬ ರಾಜಕಾರಣವನ್ನು ಏಕೆ ಪ್ರಸ್ತಾಪಿಸುವುದಿಲ್ಲ ಎಂದು ಸಚಿವ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿ, ದೇವೇಗೌಡರು ಕಣ್ಣೀರು ಹಾಕಿದರೆ ಅದನ್ನೇ ದೊಡ್ಡ ಸುದ್ದಿ ಮಾಡುತ್ತೀರಿ. ಬೇರೆ ರಾಜಕಾರಣಿಗಳು ಕಣ್ಣೀರು ಹಾಕಿಲ್ಲವೇ ಎಂದು ಹರಿಹಾಯ್ದರು. ಹಾಸನದಿಂದ ಪ್ರಜ್ವಲ್ ಸ್ಪರ್ಧೆ ಖಚಿತ. ಮಾ.22ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.