ಈಶ್ವರಪ್ಪಗೆ ಮೆದುಳು, ನಾಲಿಗೆಗೂ ಲಿಂಕ್ ತಪ್ಪಿದೆ : ಸಿದ್ದರಾಮಯ್ಯ
Team Udayavani, Apr 5, 2019, 6:22 AM IST
ಕೊಪ್ಪಳ: “ಮಹಾತ್ಮ ಗಾಂಧಿ ಅವರನ್ನು ಗೋಡ್ಸೆ ಕೊಂದ, ಆ ಪಕ್ಷದವರು ಈಶ್ವರಪ್ಪ. ಆತನಿಗೆ ಮೆದುಳು, ನಾಲಿಗೆಗೂ ಲಿಂಕ್ ತಪ್ಪಿದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಆತನೊಬ್ಬ ಹಿಂದುಳಿದ ನಾಯಕನೇ ಅಲ್ಲ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೊಲೆಗಡುಕ ಎಂದಿರುವ ಈಶ್ವರಪ್ಪನ ಹೇಳಿಕೆಯಲ್ಲೇ ಆತನ ಸಂಸ್ಕೃತಿ ಬಿಂಬಿಸುತ್ತದೆ. ಗಾಂ ಧಿಯನ್ನು ಕೊಂದವರ ಬಾಯಲ್ಲಿ ಈ ರೀತಿ ಮಾತುಗಳು ಬರುತ್ತಿವೆ. ಆತನೊಬ್ಬ ಸಾಮಾಜಿಕ ನ್ಯಾಯದ ವಿರೋಧಿ . ಬಿಜೆಪಿಯಲ್ಲಿ ಆತ ನಾಯಕನೇ ಅಲ್ಲ. ಹಿಂದುಳಿದ ವರ್ಗಕ್ಕೆ ಬಿಜೆಪಿ ಏನೂ ಮಾಡಿಲ್ಲ. ಅಲ್ಲಿ ಸಾಮಾಜಿಕ ನ್ಯಾಯ ಅನ್ನೋದೆ ಇಲ್ಲ. ಬೇಕಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಅಥವಾ ಒಬ್ಬ ಕುರುಬ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರಾ ತೋರಿಸಲಿ. ನಾಚಿಕೆಯಿದ್ದರೆ ಆತ ಆ ಪಕ್ಷದಲ್ಲಿರಬಾರದು. ಮೊದಲು ರಾಜೀನಾಮೆ ಕೊಟ್ಟು ರಾಜಕೀಯ ಸನ್ಯಾಸ ಪಡೆಯಲಿ ಎಂದರು. ಈಶ್ವರಪ್ಪ ಒಂದು ವೇಳೆ ಬಿಜೆಪಿ ತೊರೆದರೆ ಕಾಂಗ್ರೆಸ್ಗೆ ಬರಲು ಬಿಡಲ್ಲ. ಕಾಂಗ್ರೆಸ್ ಪಕ್ಷ ಆರ್ಎಸ್ಎಸ್ನವರನ್ನು ಸೇರಿಸಿಕೊಳ್ಳಲ್ಲ ಎಂದರು.