ಜಿಲ್ಲಾಧಿಕಾರಿಯಿಂದ ಉಪವಾಸ ಸತ್ಯಾಗ್ರಹ!
Team Udayavani, Apr 23, 2019, 3:36 AM IST
ಶಿವಮೊಗ್ಗ: ದೇಶದ ಸ್ವಾತಂತ್ರ್ಯಕ್ಕಾಗಿ, ನಂತರದ ದಿನಗಳಲ್ಲಿ ವಿವಿಧ ಬೇಡಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಆದರೆ, ಮತದಾನ ಜಾಗೃತಿಗಾಗಿ ಸ್ವತಃ ಜಿಲ್ಲಾಧಿಕಾರಿ ಉಪವಾಸ ಸತ್ಯಾಗ್ರಹಕ್ಕೆ ಇಳಿದಿದ್ದು ಅಪರೂಪದ ಸಂಗತಿ.
ಹೌದು. ಇಂತಹದ್ದೊಂದು ಕೆಲಸವನ್ನು ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಧಿಕಾರಿ ಕೆ.ಎ.ದಯಾನಂದ್ ಅವರು ಭಾನುವಾರ ನಗರದ ಗೋಪಿ ವೃತ್ತದಲ್ಲಿ ಮಾಡಿ, ಮತದಾರರ ಗಮನ ಸೆಳೆಯಲು ಯತ್ನಿಸಿದ್ದಾರೆ.
ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ “ಮತಾಗ್ರಹ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆ.ಎ.ದಯಾನಂದ ಹಾಗೂ ಮತ್ತಿತರರು, ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಬಗ್ಗೆ ತಿಳಿವಳಿಕೆ ಮೂಡಿಸಿದರು.
ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಜನರ ಗಮನ ಸೆಳೆದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೇವೇಂದ್ರಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.