ಆಣೆ, ಪ್ರಮಾಣ ಜಾಯಮಾನ ನಮ್ಮದಲ್ಲ: ಪ್ರಿಯಾಂಕ್ ಖರ್ಗೆ
Team Udayavani, Mar 16, 2019, 12:30 AM IST
ಕಲಬುರಗಿ: “ಯಾರು ಮಾತಿಗೆ ಬೆಲೆ ಕೊಡ್ತಾರೆಯೋ ಆ ಮಾತೇ ವೇದ. ಮಾತಿಗೆ ತಕ್ಕಂತೆ ನಾವು ನಡೆಯುತ್ತೇವೆ. ಆಣೆ, ಪ್ರಮಾಣ ಮಾಡುವುದು ನಮ್ಮಲ್ಲಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಡಾ| ಉಮೇಶ ಜಾಧವ್ 50 ಕೋಟಿ ರೂ.ಗೆ ಮಾರಾಟವಾಗಿದ್ದಾರೆಂದು ಜನರೇ ಆಡಿಕೊಳ್ಳುತ್ತಿದ್ದಾರೆ ಎಂದು ನಾನು ಹೇಳಿದ್ದೇನೆ. ಇದಕ್ಕೆ ಜಾಧವ್ ಆಣೆ, ಪ್ರಮಾಣದ ಮಾತುಗಳನ್ನಾಡಿದ್ದಾರೆ. ಆದರೆ ನಮ್ಮಲ್ಲಿ ಮಾತೇ ಅಂತಿಮ. ಆಣೆ, ಪ್ರಮಾಣ ಇಲ್ಲ. ಆ ಜಾಯಮಾನವೇ ನಮ್ಮದಲ್ಲ. ಮುಖ್ಯವಾಗಿ ನಾವು ಗುಡಿ ಗುಂಡಾರಗಳಿಗೆ ಹೋಗುವುದಿಲ್ಲ ಎಂದರು. ಜಾಧವ್ ನಮ್ಮ ವಿರುದ್ಧ ದೊಡ್ಡ ಆರೋಪಗಳ ಪಟ್ಟಿಯೇ ಮಾಡಲಿ, ಕೊನೆಗೆ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಚಿಂಚೋಳಿ ಕ್ಷೇತ್ರದ ಮಗ ಓಡಿ ಹೋಗಿದ್ದರಿಂದ ನಾನು ಚಿಂಚೋಳಿಗೆ ಹೋಗಬೇಕಾಯಿತು ಎಂದರು. ಚಿಂಚೋಳಿ ಕ್ಷೇತ್ರಕ್ಕೆ ಬಂದು ಚುನಾವಣೆ ನಿಂತು ಗೆದ್ದು ತೋರಿಸಲಿ ಎಂದು ಜಾಧವ್ ಸವಾಲು ಹಾಕಿದ್ದಾರೆ. ಚಿತ್ತಾಪುರ ಕ್ಷೇತ್ರದ ಜನರು ನನಗೆ ಆರ್ಶೀವಾದ ಮಾಡಿದ್ದಾರೆ. ಅಲ್ಲಿ ನಾನು ಸುಖವಾಗಿದ್ದೇನೆ. ಚಿಂಚೋಳಿಯಲ್ಲಿ
ಸ್ಪರ್ಧಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.