ರಮೇಶ ಸೇರಿ ಐವರು ಬಿಜೆಪಿ ಸೇರಲು ಸಿದ್ಧತೆ?
Team Udayavani, Mar 18, 2019, 12:50 AM IST
ಬೆಳಗಾವಿ: ಲೋಕಸಭೆ ಚುನಾವಣೆ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ನಾಲ್ವರು ಶಾಸಕರು ಮುಹೂರ್ತ ನಿಗದಿ ಮಾಡಿದ್ದಾರೆಯೇ? – ಬಲ್ಲ ಮೂಲಗಳ ಪ್ರಕಾರ ಕಳೆದ ಎರಡು ದಿನಗಳ ಹಿಂದೆ ಮುಂ ಬೈಗೆ ತೆರಳಿದ್ದ ರಮೇಶ ಜಾರಕಿಹೊಳಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿ, ನಂತರ ದೆಹಲಿಗೆ ತೆರಳಿದ್ದಾರೆ. ಅವರ ಜತೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಹಾಗೂ ನಾಗೇಂದ್ರ ಇದ್ದರು ಎಂದು ಹೇಳಲಾಗಿದೆ.
ಈಗ ದೆಹಲಿಯಲ್ಲಿ ಬೀಡು ಬಿಟ್ಟಿರುವ ರಮೇಶ ಜಾರಕಿಹೊಳಿ, ಮಾ.18ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದು, ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಪಕ್ಷ ಸೇರ್ಪಡೆ ಕುರಿತು ಮಾತುಕತೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ. ಅಮಿತ್ ಶಾ ಅವರ ಜತೆ ಮಾತುಕತೆ ಫಲಪ್ರದವಾದರೆ ಲೋಕಸಭೆ ಚುನಾವಣೆಗೆ ಮೊದಲೇ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗು ತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ಮಾ.15ರ ನಂತರ ಮತ್ತೂಮ್ಮೆ ಆಪ ರೇಶನ್ ಕಮಲ ನಡೆಯಬಹುದೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.