ರಾಜೀನಾಮೆ ಅಂಗೀಕಾರವಾಗದಿದ್ದರೂ ಸ್ಪರ್ಧೆ ಖಚಿತ: ಡಾ| ಜಾಧವ್
Team Udayavani, Mar 17, 2019, 1:39 AM IST
ಕಲಬುರಗಿ: ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಸ್ಪೀಕರ್ ಅಂಗೀಕಾರ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಒಂದು ವೇಳೆ ರಾಜೀನಾಮೆ ಅಂಗೀಕಾರ ಆಗದಿದ್ದರೂ ಲೋಕಸಭೆಗೆ ಸ್ಪರ್ಧಿಸುವುದು ನಿಶ್ಚಿತ ಎಂದು ಶಾಸಕ ಡಾ| ಉಮೇಶ್ ಜಾಧವ್ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಶಾಸಕನಾಗಿಯೂ ಲೋಕಸಭೆಗೆ ಸ್ಪರ್ಧಿಸಲು ಅವಕಾಶವಿದೆ. ರಾಜೀನಾಮೆಯನ್ನು ಅಂಗೀಕಾರ ಮಾಡದಿರುವ ವಿಷಯ ಇಟ್ಟುಕೊಂಡೇ ಕಾರ್ಯಕರ್ತರಲ್ಲಿ ಮತ್ತು ಜನರಲ್ಲಿ ಗೊಂದಲ ಸೃಷ್ಟಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ನ್ಯಾಯದ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಸದ್ಯ ಸ್ಪೀಕರ್ ಪ್ರವಾಸದಲ್ಲಿದ್ದಾರೆ. ಬೆಂಗಳೂರಿಗೆ ಬಂದ ಅನಂತರ 2-3 ದಿನಗಳೊಳಗೆ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಆಪರೇಷನ್ ಹಸ್ತ ನಡೆಸುವುದಿಲ್ಲ. ತಾವಂತೂ ಬಿಪಿಎಲ್ ಶಾಸಕರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ ಎ. 23ರ ಬಳಿಕ ಸೂಪರ್ ಶಾಸಕರಾಗುತ್ತಾರೆಂದು ಟೀಕಿಸಿದರು. ಈ ಸಲ ಎಲ್ಲವನ್ನು ಅಳೆದು, ತೂಗಿ ಮತದಾರರು ಇದಕ್ಕೆಲ್ಲ ಇತಿಶ್ರೀ ಹಾಡುತ್ತಾರೆ. ಇದೇ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಎರಡೆರಡು ಕ್ಷೇತ್ರ ಹುಡುಕುತ್ತಿರಬಹುದು ಎಂದರು.