ಇಮ್ರಾನ್ ಹೇಳಿಕೆ ತಂದ ವಿವಾದ
Team Udayavani, Apr 11, 2019, 6:00 AM IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭಾರತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆದ್ದರೆ ಕಾಶ್ಮೀರ ವಿಷಯವನ್ನು ಚರ್ಚಿಸಲು ಮತ್ತು ಶಾಂತಿ ಮಾತುಕತೆ ನಡೆಸಲು ಪಾಕಿಸ್ಥಾನಕ್ಕೆ ಉತ್ತಮ ಅವಕಾಶ ಸಿಗಲಿದೆ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ನೀಡಿದ್ದಾರೆ. ಆಯ್ದ ವಿದೇಶಿ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ಈ ಅಂಶ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಅಸ್ತ್ರವಾಗಿ ಪರಿಣಮಿಸಿದೆ. ಈ ಹಿಂದೆ ಭಾರತದಲ್ಲಿ ಕಾಂಗ್ರೆಸ್ ಗೆದ್ದರೆ ಪಾಕಿಸ್ಥಾನ ದಲ್ಲಿ ಪಟಾಕಿ ಸಿಡಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಕ್ಕೆ ಕಾಂಗ್ರೆಸ್ ಈಗ ತಿರುಗೇಟು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಚುನಾವಣೆಗಾಗಿ ಪಾಕಿಸ್ಥಾನದ ಜತೆಗೆ ಕೈಜೋಡಿಸಿದೆ. ಮೋದಿಗೆ ಮತ ಹಾಕಿದರೆ ಪಾಕಿಸ್ಥಾನಕ್ಕೆ ಮತ ಹಾಕಿದಂತೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮಾತನಾಡಿ, ಪಾಕಿಸ್ಥಾನ ಎನ್ನು ವುದು ಕೇವಲ ಪ್ರಧಾನಿ ನರೇಂದ್ರ ಮೋದಿಯ ವರಿಗೆ ಚುನಾವಣಾ ವಿಚಾರವಾಗಿದೆ. ಈ ವಿಚಾರ ದಲ್ಲಿ ಅವರು ವಿಪಕ್ಷಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪಾಕ್ ಪ್ರಧಾನಿ ಹೇಳಿಕೆಯಿಂದ ಎಲ್ಲವೂ ಬಯಲಾಗಿದೆ ಎಂದಿದ್ದಾರೆ.
ಉಗ್ರರಿಗೆ ಸೇನೆ ನೆರವು ಒಪ್ಪಿದ ಖಾನ್: ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಕಾಶ್ಮೀರವೇ ಪ್ರಮುಖ ವಿಚಾರ ಎಂದೂ ಅವರು ಹೇಳಿದ್ದಾರೆ. ಇನ್ನೊಂದೆಡೆ ಪಾಕಿಸ್ಥಾನದ ಸೇನೆಯೇ ಸಶಸ್ತ್ರ ಬಂಡು ಕೋರರನ್ನು ಬೆಳೆಸಿತ್ತು. ಅವರು ಈಗ ನಮಗೆ ಅಗತ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಅವರು ಪಾಕಿಸ್ಥಾನದಲ್ಲಿ ಉಗ್ರ ಸಂಘಟನೆಗಳಿಗೆ ಸೇನೆ ನೆರವು ನೀಡುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.