ಬೆಳಗಾವಿಯಲ್ಲಿ ಐಟಿ ದಾಳಿ
Team Udayavani, Apr 23, 2019, 3:52 AM IST
ಬೆಳಗಾವಿ: ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸಂಬಂಧಿಕರು ಹಾಗೂ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿರುವ ಐಟಿ ಅಧಿಕಾರಿಗಳು, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ ಹಾಗೂ ಸಂಸದ ಸುರೇಶ ಅಂಗಡಿ ಅಳಿಯ ಶಂಕರಗೌಡ ಪಾಟೀಲ ಮನೆ ಮೇಲೆ ದಾಳಿ ಮಾಡಿ ಪರಿಶೀಲಿಸಿದರು.
ಗುರುಪಾದ ಕಳ್ಳಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರ ಆಪ್ತ ಎನ್ನಲಾಗಿದ್ದು, ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ 87 ಸಾವಿರ ರೂ. ನಗದು, 200 ಗ್ರಾಂ. ಚಿನ್ನಾಭರಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸುರೇಶ ಅಂಗಡಿ ಸಂಬಂಧಿ ಕೆ.ಕೆ. ಕೊಪ್ಪ ಗ್ರಾಮದ ಶಂಕರಗೌಡ ಪಾಟೀಲ ಅವರ ಮನೆಯಲ್ಲೂ ಶೋಧ ನಡೆಸಲಾಗಿದೆ. ಭಾನುವಾರ ರಾತ್ರಿ ಸುಮಾರು 8-10 ಜನ ಐಟಿ ಅಧಿಕಾರಿಗಳು ದಾಳಿ ನಡೆಸಿ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕೃಷಿ ಮಾಡಿ ಜೀವನ ನಡೆಸುತ್ತಿರುವ ನಮ್ಮ ಮನೆ ಮೇಲೆ ಐಟಿ ದಾಳಿ ಆಗಿದೆ. ರಾತ್ರಿ ಐಟಿ ಅಧಿಕಾರಿಗಳು ಬಂದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಪತ್ನಿ ಬಳಿ ಇದ್ದ 2 ಲಕ್ಷ ರೂ. ನಗದು ಹಾಗೂ 300 ಗ್ರಾಂ. ಚಿನ್ನಾಭರಣವನ್ನು ನೋಡಿ ಅಧಿಕಾರಿಗಳು ವಾಪಸ್ ಕೊಟ್ಟಿದ್ದಾರೆ. ನಂತರ ಎಲ್ಲ ದಾಖಲೆ ನೀಡುವಂತೆ ಹೇಳಿ ಹೋಗಿದ್ದಾರೆ ಎಂದು ಶಂಕರಗೌಡ ಪಾಟೀಲ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.