ನೀರು ಕೊಡಿ..ನೀರು ಕೊಡಿ.. ಓಟು ಕೊಡ್ತೇವೆ
ಕಾಪು ವಿಧಾನಸಭಾ ಕ್ಷೇತ್ರ: ಒಂದಲ್ಲ ಎರಡಲ್ಲ ... ಕಾಲಿಟ್ಟಷ್ಟೂ ಉದ್ದಕ್ಕೆ ಸಮಸ್ಯೆಗಳದ್ದೇ ಪ್ರಸ್ತಾವ
Team Udayavani, Apr 14, 2019, 6:00 AM IST
ಕಾಪು ಪೇಟೆಯ ಒಂದು ದೃಶ್ಯ..
ಕಾಪು: ಈ ಕ್ಷೇತ್ರ ದಲ್ಲಿ ಚುನಾವಣೆಯ ಚರ್ಚೆ ಆರಂಭವಾಗುವುದು ಕಟಪಾಡಿ ಯಲ್ಲಿನ ಫ್ಲೈ ಓವರ್ ಕೊರತೆ
ಯಿಂದಲೇ. “ಯಾರಿಗೆ ಕೇಳಿದರೂ ಈ ಸಮಸ್ಯೆ ಬಗೆಹರಿಸಲಿಲ್ಲ’ ಎಂದೇ ಮಾತು ಆರಂಭವಾಗು ತ್ತದೆ. ಇಲ್ಲಿಗೆ ಸಮಸ್ಯೆ ಮುಗಿಯುವುದಿಲ್ಲ. ಇದರೊಂದಿಗೆ ನೀರಿನ ಸಮಸ್ಯೆ, ಕಸ ವಿಲೇವಾರಿ, ಯುಪಿಸಿಎಲ್ ಪರಿಣಾಮ ಎಲ್ಲವೂ ಅನುರಣನಗೊಳ್ಳುತ್ತವೆ.
ಲೋಕಸಭಾ ಚುನಾವಣೆಯ ಹವಾ ಹೇಗಿದೆ ಎಂದು ತಿಳಿದುಕೊಳ್ಳಲು ಉದಯವಾಣಿ ತಂಡ ಕ್ಷೇತ್ರಕ್ಕೆ ಭೇಟಿ ಕೊಟ್ಟಾಗ ವ್ಯಕ್ತವಾದ ಜನರ ಅಭಿಪ್ರಾಯವೆಂದರೆ, “ನಮ್ಮ ಮಾತು ಕೇಳುವ ಜನಪ್ರತಿನಿಧಿಗಳು ಬೇಕು’ ಎಂಬುದು.
ಕಟಪಾಡಿ ಪೇಟೆಯಲ್ಲಿ ಹೆದ್ದಾರಿ ದಾಟಲು ಅಂಡರ್ಪಾಸ್ ಅಥವಾ ಮೇಲ್ಸೇತುವೆ ನಿರ್ಮಿಸದೇ ಇರುವುದರಿಂದ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಹೂವಿನ ವ್ಯಾಪಾರಿ ರಮೇಶ್.
ಪಡುಬಿದ್ರಿ, ನಂದಿಕೂರು, ಮುದರಂಗಡಿ, ಎರ್ಮಾಳು, ಮೂಳೂರು, ಕಾಪು, ಉದ್ಯಾವರ, ಕಟಪಾಡಿ, ಶಿರ್ವ, ಮಂಚಕಲ್, ಪೆರ್ಣಂಕಿಲ, ಕಳತ್ತೂರು, ಕುತ್ಯಾರು, ಹಿರಿಯಡ್ಕ, ಕೊಟ್ನಕಟ್ಟೆ, ಬಜೆ, ಬೊಮ್ಮರಬೆಟ್ಟು, ಮಾನಾಯಿ, ಪಾದೂರು ಸಹಿತ ಇನ್ನಿತರ ಭಾಗಗಳಲ್ಲಿ ಸಂಚರಿಸಿದಾಗಲೂ ಜನರು, ಓಟು ಹಾಕುವುದು ಇದ್ದದ್ದೇ, ಹಾಕಬೇಕು. ಯಾರಿಗೆ ಎಂದು ನಾವ್ಯಾಕೆ ಹೇಳಬೇಕು ಎಂದೇ ಪ್ರತಿಕ್ರಿಯಿಸಿದ್ದು ವಿಶೇಷ.
ಪ್ರಚಾರದ ಅಬ್ಬರ
ಪ್ರಚಾರದಲ್ಲಿ ಈ ಕ್ಷೇತ್ರ ಹಿಂದೆ ಬಿದ್ದಿಲ್ಲ. ಈಗಾಗಲೇ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸಹಿತ ಮುಖಂಡರಾದ ಕೋಟಾ ಶ್ರೀನಿವಾಸ ಪೂಜಾರಿ, ಲಾಲಾಜಿ ಆರ್.ಮೆಂಡನ್, ಶ್ರುತಿ, ಗುರ್ಮೆ ಸುರೇಶ್ ಶೆಟ್ಟಿ ಪ್ರಚಾರ ನಡೆಸಿದ್ದಾರೆ. ಯಾವುದೇ ಬಹಿರಂಗ ಸಭೆಗಳು ನಡೆದಿಲ್ಲ. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಮುಖಂಡರಾದ ವಿನಯ ಕುಮಾರ್ ಸೊರಕೆ, ಜಯಮಾಲಾ ಪ್ರಚಾರ ನಡೆಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಟಪಾಡಿ ಹಾಗೂ ಮೂಳೂರಿನಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಭೆ ನಡೆಸಿದ್ದಾರೆ.
ಅಲ್ಲಿಯೂ ಇದೇ ಸಮಸ್ಯೆ
ಪಡುಬಿದ್ರಿಯಲ್ಲೂ ಇಂಥದ್ದೇ ಸಮಸ್ಯೆ. ಪೇಟೆಯಲ್ಲಿ ಟ್ರಾಫಿಕ್ ದಟ್ಟನೆ ಹೆಚ್ಚಾಗಿದೆ. ಸರ್ವಿಸ್ ರಸ್ತೆ ಇಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ದಾಟುವುದೂ ಕಷ್ಟ. ಅಂಡರ್ ಪಾಸ್ ಅಥವಾ ಓವರ್ಪಾಸ್ ಇಲ್ಲದೆ ತೊಂದರೆಯಾಗಿದೆ. ಮೊನ್ನೆ ಪ್ರಚಾರಕ್ಕೆ ಬಂದವರೂ ರಸ್ತೆದಾಟಲೂ ಹರ ಸಾಹಸ ಪಟ್ಟರು ಎಂದು ವಿವರಿಸಿದರು ವ್ಯಾಪಾರಿಯೊಬ್ಬರು.
ಎಳ್ಳೂರು, ಮುದರಂಗಡಿ, ಪಣಿಯೂರು, ಉಚ್ಚಿಲ, ಎರ್ಮಾಳು ಭಾಗದಲ್ಲಿ ನೀರಿನ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ರಾಶಿ ಬಿದ್ದಿರುವ ಕಸದ ಚಿತ್ರ ಸಾಮಾನ್ಯ. ಮಳೆ ಬಂದರೆ ನೀರು ಹಾದು ಹೋಗಲು ಜಾಗವಿಲ್ಲದ ಸ್ಥಿತಿ. ಈ ಬಗ್ಗೆ ಮುದರಂಗಡಿಯ ರಮೇಶ್, ಕಸ ಯಾರು ತಂದು ಬಿಸಾಡುತ್ತಾರೋ ಗೊತ್ತಿಲ್ಲ. ವಿಲೇವಾರಿಯೂ ಆಗುತ್ತಿಲ್ಲ. ಮಳೆಗಾಲದಲ್ಲಿ ನೀರುನಿಂತು ಸಮಸ್ಯೆ ಉದ್ಭವಿಸುತ್ತದೆ. ಮುಖಂಡರು ಕೇವಲ ಭರವಸೆ ನೀಡಿ ಹೋಗುತ್ತಾರೆ. ಸ್ವತ್ಛ ಭಾರತ ಅಭಿಯಾನದಂಥ ಯಾವ ಕೆಲಸವೂ ಗ್ರಾಮೀಣ ಭಾಗದಲ್ಲಿ ನಡೆಯುತ್ತಿಲ್ಲ ಎಂದರು.
ಯುಪಿಸಿಎಲ್ ನಿಯಮಬಾಹಿರ ಎಂದು ಕೋರ್ಟ್ ಆದೇಶಿಸಿದ್ದು, ನಮ್ಮ ಈ ಪ್ರದೇಶದಲ್ಲಿ ಕೃಷಿ, ಆರೋಗ್ಯದ ಮೇಲೆ ಇದು ಬಹಳ ಪರಿಣಾಮ ಬೀರಿದೆ. ಆದರೆ ಯಾವ ರಾಜಕೀಯ ಪಕ್ಷಗಳೂ ಮಾತನಾಡುತ್ತಿಲ್ಲ. ಸ್ಥಳೀಯರಿಗೆ ಕೆಲಸ ಕೊಡುತ್ತೇವೆ ಎಂದಿದ್ದೂ ಜಾರಿಯಾಗಿಲ್ಲ ಎಂದು ದೂರಿದವರು ನಂದಿಕೂರಿನ ಶಾಂಭಾ ಹಾಗೂ ವಿನೀತ್.
ಅಭಿವೃದ್ಧಿ ಅಭಿಪ್ರಾಯ
ಕಾಪು ಪರಿಸರದಲ್ಲಿ ಸಂಚರಿಸಿ, ಅಭಿವೃದ್ಧಿ ಹೇಗಾಗಿದೆ ಎಂದು ಕೇಳಿದರೆ ಒಂದಷ್ಟು ಮಂದಿ ಉತ್ತಮ ಎಂದರು. ಮತ್ತೂಂದಷ್ಟು ಮಂದಿ ಏನೂ ಸಾಲದು ಎಂದರು. ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ಕುತೂಹಲ ಇಲ್ಲೂ ಅಧಿಕವಾಗಿದೆ. ಆದರೆ ನಗರ ಭಾಗದಲ್ಲಿ ಎಲ್ಲಿಯೂ ಅಬ್ಬರ ಕಾಣ ಸಿಗುತ್ತಿಲ್ಲ ಎನ್ನುತ್ತಾರೆ ಹೋಟೆಲ್ ಉದ್ಯಮಿ ಸತೀಶ್.
ಕಾಪು ಪರಿಸರ ಬೆಳೆಯುತ್ತಿದೆ. ಇಲ್ಲಿ ಸುಸಜ್ಜಿತ ಬಸ್ಸು ತಂಗುದಾಣ ಬೇಕು ಎಂದವರು ಜಯರಾಮ. ಜಾತ್ರೆ, ಇನ್ನಿತರ ಶುಭದಿನಗಳಂದು ಇಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು. ಕೆಲಸ ಮಾಡುವವರನ್ನು ಆಯ್ಕೆ ಮಾಡುತ್ತೇವೆ ಎಂದರು ಅವರು. ಕಾಪುವಿನ ಅಜರ್ಗೆ ಎಲ್ಲ ಬ್ಯುಸಿಯ ಮಧ್ಯೆಯೂ ಮತದಾನ ಮಾಡುವುದು ಅವರ ಕರ್ತವ್ಯವಂತೆ. ಮತ ಹಾಕದೇ ಇರಲಾರರಂತೆ.
ಮಾಮೂಲಿ ಭರವಸೆ
ಮಜೂರು, ಪಾದೂರು ಪರಿಸರದಲ್ಲಿ ಚುನಾವಣೆ ಕಾವು ಕಡಿಮೆ. ಅಭ್ಯರ್ಥಿಗಳಿಗೆ ನಮ್ಮ ಸಮಸ್ಯೆಗಳನ್ನೂ ಹೇಳಿಕೊಂಡಿದ್ದೇವೆ. ಮಾಮೂಲಿಯಂತೆ ಈ ವರ್ಷವೂ ಭರವಸೆ ಸಿಕ್ಕಿದೆ ಎನ್ನುತ್ತಾರೆ ಮಜೂರಿನ ರಾಜೇಶ್.
ನೀರಿನ ಸಮಸ್ಯೆ
ಕಳತ್ತೂರು, ಕುತ್ಯಾರು ಪ್ರದೇಶದ ಕೆಲವೆಡೆ ನೀರಿನ ಸಮಸ್ಯೆ ಇದೆ. ಮೂರು ದಿನಕ್ಕೊಮ್ಮೆಯೂ ನೀರು ಬರುವುದಿಲ್ಲ. ಅದು ಬಗೆಹರಿಯಬೇಕು. ಹಿರಿಯಡ್ಕ, ಕೋಟ್ನಕಟ್ಟೆ, ಬಜೆ, ಬೊಮ್ಮರಬೆಟ್ಟು, ಮಾನಾಯಿ ಪ್ರದೇಶಗಳಲ್ಲೂ ನೀರಿನ ಸಮಸ್ಯೆ ಉದ್ಭವಿಸಿದೆ.
ರೈತರಿಗೆ ನೀರಿನ ಸಂಪರ್ಕ ಇದೆ ನಿಜ. ಆದರೆ ನಮ್ಮಂಥ ಸಣ್ಣ ಕೃಷಿಕರಿಗೆಯಾವುದೇ ಪ್ರಯೋಜನ ಸಿಗುತ್ತಿಲ್ಲ. 3 ದಿನಕ್ಕೊಮ್ಮೆ ಬರುವ ನೀರೇ ಗತಿ ಎಂದರು ಕೃಷಿಕರಾದ ಜೋಸೆಫ್. ಇನ್ನು ಶಿರ್ವ, ಮೂಡುಬೆಳ್ಳೆಯಲ್ಲೂ ನೀರಿನ ಸಮಸ್ಯೆ ಹಾಗೂ ಮನೆ ಕಟ್ಟುವವರಿಗೆ ಮರಳು ಅಭಾವವಿದೆ ಎನ್ನುತ್ತಾರೆ ಉದ್ಯಮಿ ರೋಹನ್.
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ