“ಐಟಿ ದಾಳಿಯಿಂದ ಲಾಭ’: ಸೌಕೂರು ದೇಗುಲಕ್ಕೆ ಸಿಎಂ ಭೇಟಿ
Team Udayavani, Apr 5, 2019, 9:26 AM IST
ಕುಂದಾಪುರ/ಬೈಂದೂರು: ಐಟಿ ದಾಳಿ ಮೂಲಕ ಕೇಂದ್ರ ಸರಕಾರವು ಅಧಿಕಾರ ದುರುಪಯೋಗ ಪಡಿಸುತ್ತಿದ್ದು, ಇದಕ್ಕೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ನಾವು ನ್ಯಾಯುಯುತ ಚುನಾವಣೆ ನಡೆಸಲು ಸಹಕಾರ ನೀಡುತ್ತಿದ್ದೇವೆ. ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ದಾಳಿಯಿಂದ ನಮಗೆ ಹೆಚ್ಚಿನ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅವರು ಗುರುವಾರ ರಾತ್ರಿ ಇಲ್ಲಿನ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೀಡಿದ ಬಳಿಕ, ಸೌಕೂರಿನ ಜ್ಯೋತಿಷಿಯೊಬ್ಬರ ಮನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಕರಾವಳಿಯಲ್ಲೂ ಜಯ
ಕರಾವಳಿ ಜಿಲ್ಲೆಗಳಲ್ಲೂ ಬಿಜೆಪಿ ಸ್ವಾರ್ಥ ರಾಜಕಾರಣ ಮನವರಿಕೆಯಾಗು
ತ್ತಿದೆ. 3 ಲೋಕಸಭಾ ಕ್ಷೇತ್ರಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಾತಾ ವರಣವಿದೆ. ರಾಜ್ಯದಲ್ಲಿ ಎಲ್ಲ 7 ಜೆಡಿಎಸ್ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ನಲ್ಲಿ 21ರಲ್ಲಿ 16-17 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮಂಡ್ಯದಲ್ಲಿ “ಹೈವೋಲ್ಟೆಜ್ ಕದನ’ ಎನ್ನುವುದು ವಿದ್ಯುನ್ಮಾನ ಮಾಧ್ಯಮಗಳ ಸೃಷ್ಟಿ. ನಿಖೀಲ್ ಈಗಾಗಲೇ ಜನರ ವಿಶ್ವಾಸ ಗಳಿಸಿದ್ದಾರೆ ಎಂದರು.
ಸಿಎಂ ಆಗಮನಕ್ಕೆ ಮುನ್ನ ದೇಗುಲದ ಮುಂಭಾಗದಲ್ಲಿ ಊರವರು, ಕಾಂಗ್ರೆಸ್- ಜೆಡಿಎಸ್ ನಾಯಕರು, ಕಾರ್ಯಕರ್ತರು ನೆರೆದಿದ್ದರು. ಸಿಎಂ ಬರುತ್ತಿದ್ದಂತೆ ಘೋಷಣೆ ಕೂಗಿದರು. ಸೌಕೂರು ದೇಗುಲಕ್ಕೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಭೇಟಿ ನೀಡಿರುವುದು ವಿಶೇಷ.
ಎಸ್.ಎಲ್. ಭೋಜೇಗೌಡ, ಯೋಗೀಶ್ ಶೆಟ್ಟಿ, ಕಿಶೋರ ಬಲ್ಲಾಳ್ ಕುಂದಾಪುರ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಕೆ. ಗೋಪಾಲ ಪೂಜಾರಿ, ರಾಜು ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ ಇದ್ದರು.
ಜ್ಯೋತಿಷಿ ಮನೆಗೆ ಭೇಟಿ
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಸಿಎಂ ಸಮೀಪದಲ್ಲಿ ಜ್ಯೋತಿಷಿ ಸೊಕ್ಕೊಟ್ಟು ಮಂಜುನಾಥಯ್ಯ ಅವರ ಮನೆಗೂ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಯಿತು. ಬೆಂಗಳೂರಿನ ಪ್ರಸಿದ್ಧ ಜ್ಯೋತಿಷಿ ರಾಜಗುರು ದ್ವಾರಕಾನಾಥ ಮತ್ತು ಮಂಜುನಾಥಯ್ಯ ಹಲವು ವರ್ಷಗಳಿಂದ ಸಿಎಂಗೆ ಪರಿಚಿತರಾಗಿದ್ದು, ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಿಎಂ, 1985ರಲ್ಲಿ ದೇವೇಗೌಡರು ಸೌಕೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಾರವಾರದಿಂದ ಕೊಪ್ಪಕ್ಕೆ ತೆರಳುವ ಮಾರ್ಗ ಮಧ್ಯೆ ದೇವಿಯ ಆಶೀರ್ವಾದ ಪಡೆದಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.