ಜಂಟಿ ಪ್ರಚಾರಕ್ಕೆ ದೊರೆಯದ ಒಪ್ಪಿಗೆ
Team Udayavani, Mar 26, 2019, 6:15 AM IST
ಬೆಂಗಳೂರು: ಮೈತ್ರಿ ಪಕ್ಷಗಳು ಜಂಟಿಯಾಗಿ ಲೋಕಸಭೆ ಚುನಾವಣೆ ಎದುರಿಸುತ್ತಿರುವುದರಿಂದ ಮಾರ್ಚ್ 31 ರಂದು ಎರಡೂ ಪಕ್ಷಗಳ ನಾಯಕರು ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡುವುದಾಗಿ ಹೇಳಿದ್ದರು. ಆದರೆ, ಜಂಟಿ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಇನ್ನೂ ಅಧಿಕೃತ ಒಪ್ಪಿಗೆ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯ ಮಟ್ಟದಲ್ಲಿ ನಾಯಕರು ಮೈತ್ರಿ ಮಾಡಿಕೊಂಡಿದ್ದರೂ, ಜಿಲ್ಲಾ ಹಾಗೂ ತಳ ಮಟ್ಟದಲ್ಲಿ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯ, ಮುನಿಸು ಕಡಿಮೆಯಾಗದಿರುವುದರಿಂದ ಒಗ್ಗಟ್ಟಿನ ಸಂದೇಶ ರವಾನೆ ಮಾಡಲು ಕಳೆದವಾರ ಎರಡೂ ಪಕ್ಷಗಳ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸಲು ಪ್ರಯತ್ನ ನಡೆಸಿದ್ದರು.
ನಂತರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಜಂಟಿಯಾಗಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನ ನಡೆಸಲು ನಿರ್ಧರಿಸಿದ್ದರು. ಎರಡೂ ಪಕ್ಷಗಳ ಸುಮಾರು ಐದು ಲಕ್ಷ ಕಾರ್ಯಕರ್ತರನ್ನು ಒಟ್ಟಿಗೆ ಸೇರಿಸಿ ಬೆಂಗಳೂರಿನ ಹೊರ ವಲಯದಲ್ಲಿ ಸಮಾವೇಶ ಮಾಡುವ ಮೂಲಕ ರಾಜ್ಯದಲ್ಲಿ ಕಾರ್ಯಕರ್ತರ ನಡುವೆ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಂಟಿ ಸಮಾವೇಶಕ್ಕೆ ಮುಂದಾಗಿದ್ದರು.
27 ಕ್ಕೆ ಸಭೆ: ಎರಡೂ ಪಕ್ಷಗಳ ನಾಯಕರ ಜಂಟಿ ಸಮಾವೇಶ ನಡೆಸುವ ಕುರಿತು ಚರ್ಚಿಸಲು ಎರಡೂ ಪಕ್ಷಗಳ ನಾಯಕರು ಮಾರ್ಚ್ 27 ರಂದು ಸಭೆ ಕರೆಯಲಾಗಿದ್ದು. ಅಂದಿನ ಸಭೆಯಲ್ಲಿ ಕಾರ್ಯಕ್ರಮ ನಡೆಸುವ ಅಧಿಕೃತ ದಿನಾಂಕ, ಸಮಾವೇಶ ನಡೆಯುವ ಸ್ಥಳದ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.