ಮುದ್ದಹನುಮೇಗೌಡರ ಸಪ್ಪೆ ಮುಖ, “ಕೈ” ನಾಯಕರ ತೊಳಲಾಟ
Team Udayavani, Apr 13, 2019, 3:00 AM IST
ತುಮಕೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಮುದ್ದಹನುಮೇಗೌಡರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ನಂತರ ಹೈಕಮಾಂಡ್ ಸೂಚನೆ ಹಾಗೂ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ಮನವೊಲಿಕೆ ನಂತರ ನಾಮಪತ್ರ ವಾಪಸ್ ಪಡೆದದ್ದು ಹಳೆಯ ಕಥೆ.
ಆನಂತರ ಮುನಿಸಿಕೊಂಡು ಪ್ರಚಾರದಿಂದಲೂ ದೂರ ಉಳಿದಿದ್ದ ಅವರು, ಮತ್ತೂಮ್ಮೆ ನಾಯಕರ ಮನವೊಲಿಕೆ ನಂತರ ಪ್ರಚಾರದಲ್ಲಿ ಕಾಣಿಸಿಕೊಂಡರು. ಬಳಿಕ, “ದುರಂತ ನಾಯಕನಾಗಿಯೇ ಉಳಿಯುತ್ತೇನೆ, ಪಕ್ಷಕ್ಕೆ ದ್ರೋಹ ಎಸಗಲಾರೆ’ ಎಂದರು.
ಆದರೆ, ಈಗ ಅವರು ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ, “ಅಣ್ಣಾ, ಸಾರ್, ನಿಮಗೆ ಅನ್ಯಾಯ ಆಯಿತು’ ಎಂದು ಕಾರ್ಯಕರ್ತರು, ಮುಖಂಡರು ಹೇಳುವುದು, ಅದಕ್ಕೆ, ಮುದ್ದಹನುಮೇಗೌಡರು, “ಏನು ಮಾಡುವುದು. ನನ್ನ ಹಣೆಬರಹ’ ಎಂದು ನೋವಿನಿಂದ ಹೇಳುವ ಸೀನ್ ಕ್ರಿಯೇಟ್ ಆಗುತ್ತಿದೆಯಂತೆ.
ಇದನ್ನು ನೋಡಿದ ಕಾಂಗ್ರೆಸ್-ಜೆಡಿಎಸ್ ನಾಯಕರು, ಅಯ್ಯೋ, ಅವರು ಪ್ರಚಾರಕ್ಕೆ ಬರದಿದ್ದರೂ ಪರವಾಗಿಲ್ಲ. ಬಂದು, ಮುಖ ಸಪ್ಪೆ ಮಾಡಿಕೊಂಡು ನೋವು ತೋಡಿಕೊಂಡರೆ, ನಮಗೇ ಅಳು ಬರುತ್ತದೆ. ಅದರಿಂದ ಬರೋ ಓಟು ಬರಾಂಗಿಲ್ಲ ಎಂದು ಅವಲತ್ತುಕೊಳ್ಳುತ್ತಿದ್ದಾರಂತೆ.