ಕೈ-ಕಮಲ ವಿರುದ್ದ “ಇತರರು’ ಒಗ್ಗಟ್ಟು
Team Udayavani, Mar 13, 2019, 1:55 AM IST
ಬೀದರ್: ಲೋಕಸಭೆ ಚುನಾವಣೆಗೆ ಯಾವ ಪಕ್ಷದಿಂದ ಯಾರು ಸ್ಪರ್ಧೆ ನಡೆಸಲಿದ್ದಾರೆ ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಕುತೂಹಲ ವೆಂದರೆ ಬಿಜೆಪಿ-ಕಾಂಗ್ರೆಸ್ ಸೋಲಿಸಲು ಇತರೆ ಪಕ್ಷಗಳು ಒಗ್ಗಟ್ಟಾಗಿವೆ!
ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಿಂತನೆ ನಡೆಸಿವೆ. ಇದು ಅಲ್ಪಸಂಖ್ಯಾತರ ಸಿಟ್ಟಿಗೆ ಕಾರಣವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಿದೆ. ಆದರೆ, ಯಾವ ರಾಜಕೀಯ ಪಕ್ಷಗಳೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿಲ್ಲ ಎಂದು ಮುಖಂಡರು ಕಂಗಾಲಾಗಿದ್ದಾರೆ.
ಟಿಕೆಟ್ಗಾಗಿ ನಡೆಸಿದ ಯತ್ನವೂ ಫಲ ನೀಡಿಲ್ಲ. ಹೀಗಾಗಿ ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದಿನ್ ಓವೈಸಿ
ಹಾಗೂ ಮಹಾರಾಷ್ಟ್ರದ ಪ್ರಕಾಶ ಅಂಬೇಡ್ಕರ್ ನೇತೃತ್ವದ ಭಾರಿಪಾ ಬಹುಜನ ಮಹಾಸಂಘ (ಬಿಬಿಎಂ) ಪಕ್ಷಗಳು ಮೈತ್ರಿಯಾಗಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಅವಕಾಶ ನೀಡಲು ಸಜ್ಜಾಗಿದ್ದಾರೆ. ಅದೇ ರೀತಿ ಹಿಂದುಳಿದ ವರ್ಗಗಳಿಗೆ ಮಾನ್ಯತೆ ನೀಡಬೇಕೆಂಬ ಉದ್ದೇಶದಿಂದ ಬಿಎಸ್ಪಿ ಅಭ್ಯರ್ಥಿ ಕೂಡ ಈ ಬಾರಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
2014ರ ಚುನಾವಣೆಯಲ್ಲಿ ಶಂಕರ ಭಯ್ಯ ಬಿಎಸ್ಪಿಯಿಂದ ಸ್ಪರ್ಧೆ ನಡೆಸಿ 15,079 (ಶೇ.1.58) ಮತ ಪಡೆದಿದ್ದರು. 2009ರ ಚುನಾವಣೆಯಲ್ಲಿ ಜಗನ್ನಾಥ ಜಮಾದಾರ ಸ್ಪರ್ಧಿಸಿ 22,568 (ಶೇ.2.90) ಮತ ಪಡೆದಿದ್ದರು. ಈ ಬಾರಿಯೂ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಮಾ.15ರಂದು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ
ಎಂದು ಪಕ್ಷದ ಮುಖಂಡ ಅಂಕುಶ ಗೋಖಲೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಗೆಲ್ಲುವ ಕ್ಷೇತ್ರವೆಂದರೆ ಅದು ಬೀದರ್. ಇಲ್ಲಿನ ಅನೇಕ ಮುಸ್ಲಿಂ ನಾಯಕರನ್ನು ಇತರೆ ಪಕ್ಷದವರು ಕಡೆಗಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಸಾದುದೀನ್ ಓವೈಸಿ ಮತ್ತು ಮಹಾರಾಷ್ಟ್ರದ ಪ್ರಕಾಶ ಅಂಬೇಡ್ಕರ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ನಡೆಸಲಾಗುತ್ತಿದೆ.
● ಮನಸೂರ್ ಖಾದ್ರಿ, ಎಐಎಂಐಎಂ ಜಿಲ್ಲಾಧ್ಯಕ್ಷ
ದೇಶದಲ್ಲಿ ನಮ್ಮದು 3ನೇ ದೊಡ್ಡ ರಾಜಕೀಯ ರಾಷ್ಟ್ರೀಯ ಪಕ್ಷ. ಚುನಾವಣೆಯಿಂದ ಚುನಾವಣೆಗೆ ನಮ್ಮ ಪಕ್ಷದ
ಕಾರ್ಯಕರ್ತರ ಪಡೆ ದೊಡ್ಡದಾಗುತ್ತಿದ್ದು, ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ಸಂಘಟನೆಗೆ
ಗಮನಹರಿಸಲಾಗುತ್ತಿದೆ. ಮಾ.15ರಂದು ಬೀದರ್ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಗೊತ್ತಾಗಲಿದೆ.
● ಅಂಕುಶ ಗೋಖಲೆ, ಬಿಎಸ್ಪಿ ಮುಖಂಡ
ದುರ್ಯೋಧನ ಹೂಗಾರ