ಇಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ರ್ಯಾಲಿ
ಬಿಜೆಪಿ ಕಾರ್ಯಕರ್ತರಲ್ಲಿ ಗರಿಗೆದರಿದ ಉತ್ಸಾಹ,ನಿರೀಕ್ಷೆ
Team Udayavani, Apr 13, 2019, 6:00 AM IST
ಮಂಗಳೂರು: ಪ್ರಧಾನಿ ಮೋದಿ ಶನಿವಾರ ಮಂಗಳೂರಿಗೆ ಆಗಮಿಸಿ ನಗರದ ಕೇಂದ್ರ ಮೈದಾನದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.
ಮೋದಿ ಪ್ರಧಾನಿಯಾದ ಬಳಿಕ ನಗರಕ್ಕೆ ಭೇಟಿ ನೀಡುತ್ತಿರುವುದು ಐದನೇ ಬಾರಿ.ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಮೂರನೇ ಬಾರಿ. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಪ್ರಧಾನಿ ಅಭ್ಯರ್ಥಿಯಾಗಿ ಕೇಂದ್ರ ಮೈದಾನದಲ್ಲಿ ಅವರು ಸಾರ್ವಜನಿಕ ಭಾಷಣ ಮಾಡಿದ್ದರು.
ಮೋದಿ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಸಮಿತಿಯಲ್ಲಿ ಬಹಳಷ್ಟು ಆಸೆ ಆಕಾಂಕ್ಷೆಗಳು ಗರಿಗೆದರಿವೆ. ಕಾರ್ಯಕರ್ತರನ್ನು ಚುರುಕುಗೊಳಿಸಿ ಅವರಲ್ಲಿ ಉತ್ಸಾಹವನ್ನು ಹೆಚ್ಚಿಸಲಿದೆ ಎಂದು ಭಾವಿಸಲಾಗಿದೆ. ಮೋದಿ ರ್ಯಾಲಿಯಿಂದ ಸಂಸದ ನಳಿನ್ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಪ್ರಾರಂಭದಲ್ಲಿ ಮೋದಿ ಅವರ ಪ್ರವಾಸ ಕಾರ್ಯಕ್ರಮದಲ್ಲಿ ಮಂಗಳೂರು ಭೇಟಿ ಇಲ್ಲದಿದ್ದರೂ ಬಳಿಕ ಮಾತುಕತೆಯ ಮೂಲಕ ಸೇರ್ಪಡೆಗೊಳಿಸಲಾಗಿದೆ.
ಮತ ಪರಿವರ್ತನ ಶಕ್ತಿ
2018ರಲ್ಲಿ ನಗರದಲ್ಲಿ ನಡೆದ ಮೋದಿ ರ್ಯಾಲಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಸಹಾಯಕವಾಗಿತ್ತು. ಶನಿವಾರದ ರ್ಯಾಲಿಯು ಮತದಾರರ ಮೇಲೆ ಮೋಡಿ ಮಾಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.
ಸಂಸದ ನಳಿನ್ ಬಗ್ಗೆ ಪಕ್ಷದ ಕೆಲವರಲ್ಲಿ ಇರುವ ಅಸಮಾಧಾನ ಶಮನಗೊಳಿಸಲು ಮತ್ತು ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಬಂಟ ಸಮದಾಯದವರೇ ಆದ ಯುವ ನಾಯಕ ಮಿಥುನ್ ರೈ ಅವರನ್ನು ಕಣಕ್ಕಿಳಿಸಿರುವ ಕಾರಣ ಅವರಿಗೆ ತೀವ್ರ ಪೈಪೋಟಿ ನೀಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚುರುಕು ಮುಟ್ಟಿಸಿ ಒಗ್ಗಟ್ಟು ಪ್ರದರ್ಶಿಸಲು ನೆರವಾಗಬಹುದೆಂಬ ಉದ್ದೇಶವನ್ನಿಟ್ಟುಕೊಂಡು ಮೋದಿ ರ್ಯಾಲಿಯನ್ನು ಮಂಗಳೂರಿನಲ್ಲಿ ಸಂಘಟಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ದ.ಕ. ಜಿಲ್ಲಾ ಸಮಿತಿಯು ಮೋದಿ ಮಂಗಳೂರು ಭೇಟಿ ಬಗ್ಗೆ ನಿರೀಕ್ಷೆಗಳನ್ನು ಹೊಂದಿದೆ. ಪಶ್ಚಿಮ ಘಟ್ಟ ಸಂರಕ್ಷಣೆ, ಕೋಸ್ಟ್ಗಾರ್ಡ್ ಅಕಾಡಮಿ ಸ್ಥಾಪನೆ, ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೇ ವಿಭಾಗ ರಚನೆ ಮತ್ತಿತರ ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಈಗಾಗಲೇ ಅವರಿಗೆ ಮನವಿ ಸಲ್ಲಿಸಲಾಗಿದೆ. ಮೋದಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ಒಲವು ಇದ್ದು, ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರು ಜಿಲ್ಲೆಯ ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದರು. ಜಿಲ್ಲೆಯಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.
ರ್ಯಾಲಿಯಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಮೈದಾನ ಸಿದ್ಧ
ಪ್ರಧಾನಿ ಅವರ ಬೃಹತ್ ಬಹಿರಂಗ ಪ್ರಚಾರ ಸಮಾವೇಶಕ್ಕೆ ಕೇಂದ್ರ ಮೈದಾನ ಸಿದ್ಧಗೊಂಡಿದೆ. ಕಾರ್ಯಕ್ರಮದ ಬಗ್ಗೆ ಬಿಜೆಪಿ ಚುನಾವಣ ಉಸ್ತುವಾರಿ, ಶಾಸಕ ವಿ. ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ| ವೈ. ಭರತ್ ಶೆಟ್ಟಿ ಶುಕ್ರವಾರ ಮೈದಾನಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸುನಿಲ್ ಕುಮಾರ್, 1,861 ಬೂತ್ಗಳಿಂದ 1 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
3 ಗಂಟೆಗೆ ಕಾರ್ಯಕ್ರಮ ಆರಂಭ
ಅಪರಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದೆ. 4.15ಕ್ಕೆ ಪ್ರಧಾನಿ ವೇದಿಕೆಗೆ ಆಗಮಿಸಿ ಮಾತನಾಡಲಿದ್ದಾರೆ. 2014ರ ಮೋದಿ ಸಭೆಗಿಂತಲೂ ದೊಡ್ಡ ಮಟ್ಟದ ಸಭೆ ಇದಾಗಲಿದ್ದು, ಪರಿಣಾಮವಾಗಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗೊಳಿಸಲಿದ್ದಾರೆ ಎಂದರು.
ಸಾವಿರ ಕಾರ್ಯಕರ್ತರು ಖಾಕಿ ಸಮವಸ್ತ್ರ ಧಾರಿಗಳಾಗಿ ಭಾಗಿ!
ಬೆಳ್ತಂಗಡಿ: ಪ್ರಧಾನಿ ಕಾರ್ಯಕ್ರಮದಲ್ಲಿ ತಾಲೂಕಿನಿಂದ ಒಂದು ಸಾವಿರ ಮಂದಿ ಚೌಕಿದಾರ್(ಕಾವಲುಗಾರರು)ಗಳಂತೆ ಖಾಕಿ ಸಮವಸ್ತ್ರಧಾರಿಗಳಾಗಿ ಭಾಗವಹಿಸಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಚೌಕಿದಾರ್ ಎಂಬ ಪದ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಾನು ನಿಮ್ಮ ಕಾವಲುಗಾರ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬಿಜೆಪಿಯವರು “ಮೆ ಭೀ ಚೌಕಿದಾರ್’ ಎಂಬ ಘೋಷಣೆ ಯೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಧಾನಿ ಕಾರ್ಯಕ್ರಮದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳ ಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದ ಕಾರ್ಯಕರ್ತರಲ್ಲಿ ಮನವಿ ಮಾಡಿದಾಗ ಈ ರೀತಿಯಲ್ಲಿ ಖಾಕಿ ವಸ್ತ್ರಧಾರಿಗಳಾಗಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಎಲ್ಲರೂ ಸ್ವಂತ ಖರ್ಚಿನಿಂದ ಬಟ್ಟೆ ಹೊಲಿಸಿಕೊಂಡು ಸ್ವ ಇಚ್ಛೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅಂಗಿಯ ಹಿಂಬದಿ ಹಾಗೂ ಟೋಪಿಯ ಮೇಲೆ “ಮೆ ಭೀ ಚೌಕಿದಾರ್’ ಎಂದು ಬರೆಯಲಾಗಿದೆ ಎಂದು ಶಾಸಕ ಹರೀಶ್ ಪೂಂಜ “ಉದಯವಾಣಿ’ಗೆ ತಿಳಿಸಿದ್ದಾರೆ.
ಇಂದು ಮದ್ಯ ಮಾರಾಟ ಇಲ್ಲ
ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಎ. 13ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರ ವರೆಗೆ ಮಂಗಳೂರು, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ