ಮೀಸಲಾತಿಗೆ ಕೊಕ್ಕೆ ಹಾಕಿದರೂ ಮಾತಾಡದ ಖರ್ಗೆ: ವೈಜನಾಥ
Team Udayavani, Apr 22, 2019, 3:00 AM IST
ಕಲಬುರಗಿ: 371ಜೆ ವಿಧಿ ಬಗ್ಗೆ ಮಾತನಾಡುವರು ಲೋಕೋಪಯೋಗಿ ಇಲಾಖೆಯಲ್ಲಿ 870 ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ಗಳ ನೇಮಕಾತಿ ಮೀಸಲಾತಿಗೆ ಕೊಕ್ಕೆ ಹಾಕಿದರೂ ಸುಮ್ಮನೆ ಕುಳಿತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ ಹಾಕಬೇಡಿ ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವೈಜನಾಥ ಪಾಟೀಲ್ ಕರೆ ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಜಪ ಮಾಡಿಕೊಳ್ಳುತ್ತಾ ಮುಖ್ಯಮಂತ್ರಿಯಾದರು. ಅಹಿಂದ ಜನರ ಹಿತ ಕಾಪಾಡಲೇ ಇಲ್ಲ. ಅಲ್ಪಸಂಖ್ಯಾತ ವರ್ಗದ ಖಮರುಲ್ ಇಸ್ಲಾಂ ಅವರನ್ನು ಸಂಪುಟದಿಂದ ಹೊರ ಹಾಕಿದರು. ಹಿಂದುಳಿದ ವರ್ಗದವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಅವರನ್ನು ಜೀವಂತ ಇಟ್ಟು ಕೊಲ್ಲಲಾಯಿತು.
ದಲಿತರಾದ ಶ್ರೀನಿವಾಸ ಪ್ರಸಾದ ಅವರಿಗೆ ಸಚಿವ ಸ್ಥಾನದಿಂದ ವಜಾಗೊಳಿಸಲಾಯಿತು. ಇದೇ ಸಿದ್ದರಾಮಯ್ಯ ಅವರ ಅಹಿಂದ ಪ್ರೀತಿ. ಈಗ ಸಮನ್ವಯ ಸಮಿತಿ ಅಧ್ಯಕ್ಷರಂತೆ. ಇದಕ್ಕೆ ಯಾವುದೇ ಮಾನ್ಯತೆ ಇಲ್ಲ. ಸುಮ್ಮನೆ ಶಾಸಕರಿಗೆ ಹೆದರಿಸಲು ಮಾಡಿಕೊಂಡಿರುವ ಕೂಟ ಎಂದರು.