ರಾಜಕೀಯದಲ್ಲಿ ರತ್ನಪ್ರಭಾ 1ನೇ ತರಗತಿ: ರಾಮಲಿಂಗಾರೆಡ್ಡಿ
Team Udayavani, Apr 20, 2019, 3:00 AM IST
ಬೀದರ: “ಮೈತ್ರಿ ಪಕ್ಷಗಳಲ್ಲಿ ಸಮನ್ವಯ ಕೊರತೆ ಇದೆ ಎಂದು ಆರೋಪಿಸಿರುವ ನಿವೃತ್ತ ಸಿಎಸ್ ಕೆ.ರತ್ನಪ್ರಭಾ ರಾಜಕೀಯದಲ್ಲಿ ಇನ್ನೂ ಒಂದನೇ ತರಗತಿಯಲ್ಲಿದ್ದಾರೆ’ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಿವೃತ್ತಿ ಆದ ನಂತರ ಮೊಮ್ಮಕ್ಕಳ ಜತೆಗೆ ಆಟ ಆಡಿಕೊಂಡು ಕಾಲ ಕಳೆಯಬೇಕಿತ್ತು.
ಅವರಿಗೆ ಯಾಕೆ ಬೇಕಿತ್ತು ಈ ರಾಜಕೀಯ? ಉತ್ತಮ ಅಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದ ರತ್ನಪ್ರಭಾ ಅವರು ರಾಜಕೀಯದಲ್ಲಿ ಹೊಸಬರು. ಟೀಕಿಸಲು ಅವರಿಗೆ ಅನುಭವ ಬೇಕು. ಲೋಕಸಭೆ ಚುನಾವಣೆ ನಂತರ ಸರ್ಕಾರ ಉರುಳುತ್ತದೆ ಎಂಬುದು ಸುಳ್ಳು. ಚುನಾವಣೆ ನಂತರ ಕೂಡ ಮೈತ್ರಿ ಸರ್ಕಾರದ ಆಡಳಿತ ಮುಂದುವರಿಯುತ್ತದೆ. ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ’ ಎಂದು ಸ್ಪಷ್ಟಪಡಿಸಿದರು.