ಚುನಾವಣೆ ಪೂರ್ವ 48 ತಾಸು ಮುದ್ರಣ ಜಾಹೀರಾತಿಗೆ ನಿರ್ಬಂಧ
Team Udayavani, Apr 14, 2019, 6:09 AM IST
ಮಂಗಳೂರು/ಉಡುಪಿ: ಚುನಾವಣೆಯ ಪೂರ್ವದ 48 ತಾಸು ಅವಧಿಯಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಂಘ-ಸಂಸ್ಥೆಗಳು, ಅಭ್ಯರ್ಥಿಗಳು, ಪಕ್ಷಗಳು ಜಾಹೀರಾತು ನೀಡುವುದನ್ನು ಚುನಾವಣಾ ಆಯೋಗ ಸಂಪೂರ್ಣವಾಗಿ ನಿರ್ಬಂಧಿಸಿದೆ.
ಚುನಾವಣೆಯಂದು ಅಥವಾ ಅದರ ಹಿಂದಿನ ದಿನ ಪ್ರಕಟವಾಗುವ ಕೆಲವೊಂದು ಜಾಹೀರಾತುಗಳು ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿಸುವ, ದ್ವೇಷ ಭಾವನೆ ಕೆರಳಿಸಬಹುದು ಅಲ್ಲದೆ ಚುನಾವಣ ಪ್ರಕ್ರಿಯೆಯ ಉದ್ದೇಶವೇ ಅಡಿಮೇಲಾಗುವ ಸಾಧ್ಯತೆ ಇರುತ್ತದೆ. ಅಂತಿಮ ಹಂತದಲ್ಲಿ ಪ್ರಕಟವಾಗುವ ಕೆಲವೊಂದು ಜಾಹೀರಾತುಗಳಿಗೆ ಎದುರಾಳಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ಸ್ಪಷ್ಟೀಕರಣ ನೀಡುವ ಅವಕಾಶ ತಪ್ಪಿ ಹೋಗುತ್ತದೆ. ಈ ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಹೀಗಾಗಿರುವುದು ಆಯೋಗದ ಗಮನಕ್ಕೆ ಬಂದಿರುವುದ ರಿಂದ ಈ ನಿರ್ಣಯಕ್ಕೆ ಬರಲಾಗಿದೆ.
ಆದ್ದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಎಪ್ರಿಲ್ 16 ಹಾಗೂ 17ರಂದು ಮುದ್ರಣ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತುಗಳಿಗೆ ಆಯಾ ಲೋಕಸಭಾ ಕೇÒತ್ರಗಳ ಎಂ.ಸಿ.ಎಂ.ಸಿ. ಸಮಿತಿಗಳಿಂದ ಪೂರ್ವಾನುಮತಿ ಕಡ್ಡಾಯಗೊಳಿಸಿ ಚುನಾವಣ ಆಯೋಗ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದನ್ನು ಎಲ್ಲ ರಾಜಕೀಯ ಪಕ್ಷಗಳು, ಚುನಾವಣ ಅಭ್ಯರ್ಥಿಗಳು ಹಾಗೂ ದಿನಪತ್ರಿಕೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಉಭಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಇಲ್ಲಎ. 16ರಂದು ಸಂಜೆ 6 ಗಂಟೆಯಿಂದ ಎ. 18ರ ಸಂಜೆ 6 ಗಂಟೆಯವರೆಗೆ ಟಿವಿ, ವೆಬ್ಸೈಟ್ ಸೇರಿದಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳಿಗೆ ಅಥವಾ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಮತಯಾಚನೆ ಸೇರಿದಂತೆ ಯಾವುದೇ ಚುನಾವಣ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಇಂತಹ ಜಾಹೀರಾತು ಅಥವಾ ಸಂದೇಶ ಹಾಕುವವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಕ್ರಮ ಕೈಗೊಳ್ಳ ಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.