“ಸುಮಲತಾ ಅಂಬರೀಶ್ ಮಂಡ್ಯದ ಸೊಸೆ’
Team Udayavani, Apr 5, 2019, 6:00 AM IST
ಬೆಂಗಳೂರು: “ಸಂಸದ ಎಲ್.ಆರ್.ಶಿವರಾಮೇಗೌಡರು ಸುಮಲತಾ ಅವರ ಜಾತಿ ವಿಚಾರ ಪ್ರಸ್ತಾಪಿಸಿದ್ದನ್ನು ನಾನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇನೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.
ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಶಿವರಾಮೇಗೌಡರ ವಿರುದ್ಧ ನಾನು ಶಿಸ್ತು ಕ್ರಮ ಸಹ ಕೈಗೊಳ್ಳುತ್ತೇನೆ. ಅವರು ಆ ಮಾತು ಆಡಬಾರದಿತ್ತು. ಮಂಡ್ಯದ ಗೌರವ ಹಾಳು ಮಾಡಿದ್ದಾರೆ. ಹಿಂದೆ ಸಚಿವ ರೇವಣ್ಣ ಅವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾಗಲೂ ನಾನೇ ಕ್ಷಮೆ ಕೇಳಿದ್ದೆ. ಮಂಡ್ಯದ ಒಕ್ಕಲಿಗರು ಜಾತಿವಾದಿಗಳಲ್ಲ.
ನಾನು, ಸಿದ್ದರಾಮಯ್ಯ ಸೇರಿದಂತೆ ಹಲವಾರು ನಾಯಕರ ರಾಜಕೀಯ ಬೆಳವಣಿಗೆಗೆ ಸಹಕಾರ ನೀಡಿದ್ದಾರೆ. ಮಂಡ್ಯದ ನೆಲ ಎಂದೂ ಜಾತಿವಾದಿಗಳ ನೆಲ ಆಗಿರಲಿಲ್ಲ. ಮುಂದೆ ಆಗುವುದೂ ಇಲ್ಲ. ಅಲ್ಲಿ ಘಟಾನುಘಟಿ ನಾಯಕರು ರಾಜಕೀಯವಾಗಿ ಬೆಳೆದಿದ್ದಾರೆ’ ಎಂದು ತಿಳಿಸಿದರು.
“ಸುಮಲತಾ ಮಂಡ್ಯದ ಸೊಸೆ. ಮಂಡ್ಯದ ಗಂಡು ಮಗ ಅಂಬರೀಶ್ ಪತ್ನಿ. ದಯವಿಟ್ಟು ಯಾವುದೇ ಪಕ್ಷದವರು ಇರಲಿ ವೈಯಕ್ತಿಕ, ಜಾತಿ ವಿಚಾರದಲ್ಲಿ ಟೀಕೆ ಮಾಡಬೇಡಿ. ಇದು ಶೋಭೆ ತರುವುದಿಲ್ಲ. ನಿಮ್ಮ ಸಾಧನೆ ಕೇಳಿ ಮತ ಪಡೆಯಿರಿ’ ಎಂದು ಸಲಹೆ ನೀಡಿದರು.