ಪುಲ್ವಾಮಾ ದಾಳಿ ಗೊತ್ತಿದ್ದೂ ಮಾಹಿತಿ ಕೊಡಲಿಲ್ಲವೇಕೆ ?
Team Udayavani, Apr 12, 2019, 3:17 PM IST
ಶ್ರೀರಂಗಪಟ್ಟಣ: ಪುಲ್ವಾಮಾ ದಾಳಿ ನಡೆಯೋದು ಗೊತ್ತಿದ್ದೂ ಕೇಂದ್ರಕ್ಕೆ ಮಾಹಿತಿ ಕೊಡಲಿಲ್ಲವೇಕೆ ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ತಿರುಗೇಟು ನೀಡಿದರು.
ಪಟ್ಟಣದ ಗುಂಬಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿ ಮೊದಲೇ ಗೊತ್ತಿದ್ದರೆ ಸಿಎಂ ಕುಮಾರಸ್ವಾಮಿ ಅದನ್ನು ತಡೆಯಬಹುದಾಗಿತ್ತಲ್ಲವೇ. ಆ ಮಾಹಿತಿಯನ್ನು ಕೊಟ್ಟು ಸೈನಿಕರನ್ನು ಉಳಿಸುವ ಪ್ರಯತ್ನವನ್ನು ಅಂದೇ ಮಾಡಬಹುದಾಗಿತ್ತಲ್ಲವೇ. ಅದನ್ನು ಮುಚ್ಚಿಟ್ಟಿದ್ದೇಕೆ. ಅದೆಲ್ಲವನ್ನೂ ಜನರು ಈಗ ಕೇಳುತ್ತಿದ್ದಾರೆ ಎಂದು ಹೇಳಿದರು. ಕಲ್ಲು ತೂರಾಟ, ದಬ್ಟಾಳಿಕೆ, ಅಹಂಕಾರದ ಮಾತುಗಳು
ಅವರ ಕಡೆಯಿಂದಲೇ ಬರುತ್ತಿವೆ. ನಮ್ಮ ಕಡೆಯಿಂದ ಅಂತಹದ್ದು ಯಾವುದೂ ನಡೆಯುತ್ತಿಲ್ಲ. ಆ ರೀತಿ ಮಾಡಿದರೆಅದು ಯಾರ ಚಿತಾವಣೆ ಎನ್ನುವುದು ಅವರಿಗೇಗೊತ್ತಾಗಬೇಕು. ಇಂಟಲಿಜೆನ್ಸ್ ಅಧಿಕಾರಿಗಳನ್ನು ಬಿಟ್ಟು ಅವರೇ ಆ ಕೆಲಸ ಮಾಡಿಸುತ್ತಿದ್ದಾರೆ ಎಂದು ದೂರಿದ ಅವರು, ಜನರೇ ನನ್ನನ್ನು ಪ್ರೀತಿಯಿಂದ ಕ್ಷೇತ್ರಕ್ಕೆ ಕರೆತಂದಿದ್ದಾರೆ. ಅವರೆದುರು ಅನುಕಂಪದ ನಾಟಕವಾಡುವ ಅಗತ್ಯವಿಲ್ಲ ಎಂದು ಸಿಎಂ ವಿರುದ್ಧ ಛಾಟಿ ಬೀಸಿದರು.
ನೀವ್ಯಾಕೆ ಏನು ಕ್ರಮ ಕೈಗೊಂಡಿಲ್ಲ: ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದರೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ. ಈ ವಿಷಯವಾಗಿ ನೀವ್ಯಾಕೆ ಸಿಎಂ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬೇರೆ ದೇಶದಲ್ಲಿ ಈ ವಿಚಾರ ಸಾಕಷ್ಟು ಗಂಭೀರವಾಗುತ್ತದೆ. ಮುಖ್ಯಮಂತ್ರಿ
ಸ್ಥಾನದಲ್ಲಿ ಕುಳಿತು ಮಾಧ್ಯಮದವರಿಗೇ ಈ ರೀತಿ ಹೆದರಿಕೆ ಬೆದರಿಕೆ ಹಾಕುತ್ತಾರೆ ಎಂದರೆ ನನ್ನಂತಹ ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿದೆ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಅನ್ನೋದನ್ನೇ ಮರೆತಿದ್ದಾರೆ. ಮೊದಲಿಗೆ ನಮ್ಮ ಬೆಂಬಲಿಗರಿಗೆ ಬೆದರಿಕೆ ಹಾಕಿದರು. ಈಗ ಮಾಧ್ಯಮಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಸಾಮಾಣ್ಯ ವಿಷಯವಲ್ಲ. ದಯವಿಟ್ಟು ಇದನ್ನು ಕಡೆಗಣಿಸಬೇಡಿ. ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮಂತಹವರಿಗೆ ಏನೆಲ್ಲಾ ಬೆದರಿಕೆ ಹಾಕಿದ್ದಾರೆ ಅನ್ನೋದು ನಿಮಗೆ ಈಗ ಅರ್ಥವಾಗಿರಬೇಕು. ಈ ವಿಷಯವಾಗಿ ನನ್ನ ಪ್ರತಿಕ್ರಿಯೆ ಕೇಳುವುದಕ್ಕಿಂತ ಜನರನ್ನು ಕೇಳಿ. ಎನರು ಹೇಳುವುದನ್ನು ನಾನು ಒಪ್ಪುತ್ತೇನೆ ಎಂದರು.
ನನ್ನ ವಿಚಾರ ಇವರಿಗೇಕೆ? ನಾನು ಸಿಂಗಾಪೂರ್ಗೆ ಹೋಗ್ತಿನೋ, ಅಮೆರಿಕಾಗೆ ಹೋಗ್ತಿನೋ, ಜನರ ಮಧ್ಯೆ ಇರುತ್ತೇನೋ ಅನ್ನೋ ವಿಚಾರ ಇವರಿಗೇಕೆ. ನಮ್ಮದು ಪ್ರಜಾಪ್ರಭುತ್ವ. ಯಾರು ಎಲ್ಲಿಗೆ ಬೇಕಾದರೂ ಹೋಗಬಹುದು. ಅವರು ಎಲ್ಲಿ ಹೋಗುತ್ತಾರೆ ಅಂತ ನಾನೇದಾರೂ ಪ್ರಶ್ನಿಸಿದ್ದೀನಾ ಎಂದು ಚುನಾವಣೆ ಮುಗಿದ ಬಳಿಕ ಜನರ ಕೈಗೆ ಸಿಗುವುದಿಲ್ಲ ಎನ್ನುವ ಟೀಕಾಕಾರರಿಗೆ ಸುಮಲತಾ ಉತ್ತರ ನೀಡಿದರು. ನಾನು ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಇದ್ದೇನೆ. ಅವರು ಯಾವ ಹೋಟೆಲ್ನಲ್ಲಿ ಇದ್ದಾರೆ. ಅಲ್ಲಿ ಏನೇನು ನಡೆಯುತ್ತಿದೆ. ಅಲ್ಲಿ ಕುಳಿತು ಸಿಎಂ ಏನ್ಮಾಡ್ತಿದ್ದಾರೆ ಎಂದು ಎಂದಾದರೂ
ಕೇಳಿದ್ದೇನಾ. ಕುಮಾರಸ್ವಾಮಿ ಅವರು ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.
ಸುಮಲತಾ ಭೇಟಿ: ಶ್ರೀರಂಗಪಟ್ಟಣದ ಸಮೀಪವಿರುವ ಗಂಜಾಂಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ, ಅಲ್ಲಿರುವ ಗುಂಬಜ್ನ ಟಿಪ್ಪು ಸಮಾಧಿಗೆ ನಮಿಸಿದರು. ಟಿಪ್ಪುವಿನ ಸಮಾಧಿಗೆ ಹೂವಿನ ಚಾದರ ಹೊದಿಸಿ ಪುಷ್ಪಾರ್ಚನೆ ಮಾಡಿದರು. ಸುಮಲತಾ ಅಂಬರೀಶ್ ಹೆಸರಿನಲ್ಲಿ ಧರ್ಮಗುರುವಿನಿಂದ ವಿಶೇಷ ಪ್ರಾರ್ಥನೆ ನಡೆಯಿತು. ಅಲ್ಲಿಂದ ರೋಡ್ ಶೋ ಆರಂಭಿಸಿದ ಸುಮಲತಾ ಅಂಬರೀಶ್ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದರು. ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಬಿಜೆಪಿ ಪಕ್ಷದ ಬೆಂಬಲ ಸಿಕ್ಕಿದೆಯಷ್ಟೇ. ನಾನು ಬಿಜೆಪಿ ಸೇರುವುದಿಲ್ಲ. ರಾಜಕೀಯ ಪಕ್ಷ ಸೇರುವ ಸಮಯ ಬಂದಾಗ ನಿಮ್ಮ ನಿರ್ಧಾರದಂತೆ ತೀರ್ಮಾನ ಕೈಗೊಳ್ಳುತ್ತೇನೆ. ನಾನು ಬಿಜೆಪಿ ಅಭ್ಯರ್ಥಿ ಎನ್ನುವ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ನನ್ನನ್ನು ಆಶೀರ್ವದಿಸಿ ಲೋಕಸಭೆಗೆ ಕಳುಹಿಸಿಕೊಡಿ ಎಂದುಹಿಂದಿ ಭಾಷೆಯಲ್ಲೇ ಮುಸ್ಲಿಮರಿಗೆ ಸ್ಪಷ್ಟನೆ ನೀಡಿದರು