ಮಂಡ್ಯ ನಾಯಕರ ಜತೆ ಸಿಎಂ ಚರ್ಚೆ
Team Udayavani, Mar 19, 2019, 12:35 AM IST
ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿ
ರುವ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಸೋಮವಾರ ಜೆಡಿಎಸ್ ನಾಯಕರ ಜತೆ ಸಮಾಲೋಚನೆ ನಡೆಸಿದರು.
ಶೃಂಗೇರಿಯಿಂದ ಸಂಜೆ ಬೆಂಗಳೂರಿಗೆ ವಾಪಸಾಗಿ ಮಂಡ್ಯ ಮುಖಂಡರಿಗೆ ಬುಲಾವ್ ನೀಡಿ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದರು.
ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿ ಜಿಲ್ಲೆಯ ಜೆಡಿಎಸ್ ಶಾಸಕರು ಪಾಲ್ಗೊಂಡಿದ್ದರು.
ಸುಮಲತಾ ಅವರ ಸ್ಪರ್ಧೆ, ಪ್ರಚಾರದಿಂದ ಆಗಬಹುದಾದ ಪರಿಣಾಮ, ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತಿರುವುದು ಹಾಗೂಚಿತ್ರರಂಗದವರ ಬೆಂಬಲದಿಂದ ಆಗುವ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕಾಂಗ್ರೆಸ್ನ ಕೆಲವು ನಾಯಕರಷ್ಟೇ ಸುಮಲತಾ ಅವರ ಜತೆಗಿದ್ದು ಬಹಿರಂಗವಾಗಿಯೂ ಗುರುತಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ನ ಮಾಜಿ ಶಾಸಕರು ಯಾರೂ ಬೆಂಬಲ ನೀಡುವುದಾಗಿಯೂ ಹೇಳಿಲ್ಲ. ಹೀಗಾಗಿ, ಆತಂಕಪಡುವ ಅಗತ್ಯವಿಲ್ಲ ಎಂದು ಸಿ.ಎಸ್.ಪುಟ್ಟರಾಜು ತಿಳಿಸಿದರು.
ನಾಮಪತ್ರ ಸಲ್ಲಿಕೆ ನಂತರ ಜೆಡಿಎಸ್ -ಕಾಂಗ್ರೆಸ್ ಜಂಟಿಯಾಗಿ ಪ್ರಚಾರ ಮಾಡುವುದು ಸೂಕ್ತ ಎಂಬಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು ಎಂದು ಹೇಳಲಾಗಿದೆ. ಇದಾದನಂತರ ಕುಮಾರಸ್ವಾಮಿ ಪಕ್ಷದ ಕಚೇರಿಗೆ ಭೇಟಿ ನೀಡಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮುಖಂಡರ ಜತೆ ಸಮಾಲೋಚನೆ ನಡೆಸಿದರು.