ದೇವೇಗೌಡರ ಕುಟುಂಬಕ್ಕೆ ಮಾತ್ರ ಕಣ್ಣೀರ ಪೇಟೆಂಟ್: ಶೆಟ್ಟರ್
Team Udayavani, Apr 18, 2019, 3:00 AM IST
ಹೂವಿನಹಡಗಲಿ: “ರಾಜ್ಯದಲ್ಲಿ ಕಣ್ಣೀರಿನ ಪೇಟೆಂಟ್ ಯಾರಿಗಾದರೂ ಕೊಡಬೇಕಾಗಿದ್ದರೆ ಅದು, ದೇವೇಗೌಡ ಮತ್ತು ಅವರ ಕುಟುಂಬಕ್ಕೆ ಮಾತ್ರ ಕೊಡಬೇಕು. ಅವರ ಕುಟುಂಬದವರೆಲ್ಲರೂ ಸಮಯ, ಸಂದರ್ಭ ನೋಡಿಕೊಂಡು ಮಾತು, ಮಾತಿಗೂ ಬಹಳ ಚೆನ್ನಾಗಿ ಕಣ್ಣೀರು ಹಾಕುತ್ತಾರೆ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅವರ ಮಗನ ಸೋಲಿನ ಭೀತಿಯಿಂದಾಗಿ ಕಳೆದ 3 ದಿನಗಳಿಂದ ಮಂಡ್ಯದಲ್ಲಿಯೇ ಠಿಕಾಣಿ ಹೂಡಿದ್ದರು. ಮಗನನ್ನು ಗೆಲ್ಲಿಸಲು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರಲ್ಲದೆ ಏನೆಲ್ಲ ತಂತ್ರಗಾರಿಕೆ ನಡೆಸುತ್ತಾ ತೊಳಲಾಡುತ್ತಿದ್ದಾರೆ ಎಂದರು.
ದೇವೇಗೌಡರ ಕುಟುಂಬ ರಾಜಕಾರಣದಲ್ಲಿ ಸುಖೀ ಕುಟುಂಬವಾಗಬೇಕಾದರೆ ಚೆನ್ನಮ್ಮ ಅವರನ್ನು ರಾಜ್ಯಸಭೆಗೆ ಕಳುಹಿಸಬೇಕು. ಇದಕ್ಕೆ ಒಮ್ಮೆ ಅವಕಾಶ ಮಾಡಿಕೊಟ್ಟರೆ, ದೇವೇಗೌಡರದು ರಾಜಕಾರಣದ ಸಂಪೂರ್ಣ ಸುಖೀ ಕುಟುಂಬವಾಗುತ್ತದೆ ಎಂದು ಶೆಟ್ಟರ್ ವ್ಯಂಗ್ಯವಾಡಿದರು.