ಬಿಜೂರು: ನೀರಿನ ಸಮಸ್ಯೆಗೆ ಸ್ಪಂದಿಸದ ಜಿಲ್ಲಾಡಳಿತಕ್ಕೆ ನೀರಸ ಮತದಾನದ ಉತ್ತರ
Team Udayavani, Apr 24, 2019, 6:11 AM IST
ಬೈಂದೂರು: ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೆ ಒಳಪಡುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಯಶಸ್ವಿ ಮತದಾನ ನಡೆದಿದೆ. ಆದರೆ ಬಿಜೂರಿನಲ್ಲಿ ಮಾತ್ರ ಮತದಾರರು ಜಿಲ್ಲಾಡಳಿತದ ಮೇಲಿನ ಮುನಿಸನ್ನು ಚುನಾವಣೆಗೆ ನೀರಸ ಸ್ಪಂದನದ ಮೂಲಕ ತೋರ್ಪಡಿಸಿದ್ದಾರೆ.
ಬೇಸಗೆ ಆರಂಭದಲ್ಲಿ ಕುಡಿಯುವ ನೀರಿನ ಬೇಡಿಕೆ ಇಟ್ಟಿರುವ ಬಿಜೂರಿನ ಚಮ್ಮಾಣಹಿತ್ಲು, ಗರಡಿ ಮುಂತಾದ ಭಾಗದ ಜನರು ಮತದಾನ ಬಹಿಷ್ಕರಿಸುವ ಫಲಕ ಅಳವಡಿಸಿದ್ದರು. ಈ ಸಂದರ್ಭ ತಹಶೀಲ್ದಾರ್ ಈ ಭಾಗಕ್ಕೆ ಭೇಟಿ ನೀಡಿ ಫಲಕ ತೆರವುಗೊಳಿಸಿ ಮತದಾನ ಮಾಡುವಂತೆ ತಿಳಿಸಿದ್ದರು.ಇದಕ್ಕೆ ಸ್ಪಂದಿಸದ ಜನರು ಹನ್ನೊಂದು ಗಂಟೆಯ ಹೊತ್ತಿಗೆ ಮೊದಲ ಮತ ಚಲಾವಣೆಯಾಗಿದೆ. 1 ಗಂಟೆ ಸುಮಾರಿಗೆ ಕೇವಲ ನಾಲ್ಕು ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. 100ರಿಂದ 150 ಮತದಾರರಿರುವ ಈ ಭಾಗದಲ್ಲಿ 300ಕ್ಕೂ ಅಧಿಕ ಜನಸಂಖ್ಯೆಯಿದೆ. ಬೇಸಗೆಯಲ್ಲಿ ವ್ಯಾಪಕ ನೀರಿನ ಸಮಸ್ಯೆ ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿಯಿದೆ.
ಚುನಾವಣೆ ದಿನ ಭಾಗದ ಮತದಾರರು ನಮಗೆ ಕುಡಿಯಲು ನೀರಿಲ್ಲ.ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿದಾಗ ನಮಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಶಾಸಕರು ಕೂಡ ಕೊಲ್ಲೂರು ಮೂಕಾಂಬಿಕಾ ದೇವಿಯ ಆಣೆ ಮಾಡಿ ಭಾವಿ ತೋಡಿಸುವ ಭರವಸೆ ನೀಡಿದ್ದರು.ಆದರೆ ಯಾರೂ ಕೂಡ ಸ್ಪಂದಿಸಿಲ್ಲ. ಹೀಗಾಗಿ ನಾವು ಮತ ಚಲಾಯಿಸುವುದಿಲ್ಲ ಎಂದು ಇಲ್ಲಿನ ಪ್ರಜ್ಞಾವಂತ ಯುವಕರು ಹೇಳುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಬಿಂಬಿಸುತ್ತದೆ.ಮತದಾನ ಕೇಂದ್ರ ಮಾತ್ರ ಬಿಕೋ ಎನ್ನುತ್ತಿದೆ.
ಜಿಲ್ಲಾಧಿಕಾರಿಗಳು ಬಂದರೆ ಮಾತ್ರ ಮತ
ಈ ಭಾಗದ ಯುವಕರು ಹಾಗೂ ಮಹಿಳೆಯರು ಹೇಳುವ ಪ್ರಕಾರ ನಮಗೆ ಸರಕಾರ ಬಾವಿ ನೀಡಿದರು ಸಹ ಸ್ಥಳೀಯ ರಾಜಕೀಯದಿಂದಾಗಿ ಕೈ ತಪ್ಪಿ ಹೋಗಿದೆ.ಜಿಲ್ಲಾಡಳಿತ ನಮಗೆ ಸಮರ್ಪಕವಾಗಿ ಸ್ಪಂಧಿಸಿಲ್ಲ.ಮತದಾನ ತಪ್ಪಿಸಬಾರದು ಎನ್ನುವ ತಿಳುವಳಿಕೆ ನಮಗೂ ಇದೆ. ಆದರೆ ಜನರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಇಲಾಖೆ ನಮ್ಮನ್ನು ನಿರ್ಲಕ್ಷಿಸಬಾರದು.
ಜಿಲ್ಲಾಧಿಕಾರಿಗಳು ಬೈಂದೂರಿ ನಲ್ಲಿದ್ದರು ಕೂಡ ನಮ್ಮ ಬಗ್ಗೆ ಗಮನಹರಿಸಿಲ್ಲ.ಯಾರಿಂದಲೂ ನಮಗೆ ಸ್ಪಂಧನೆ ಸಿಕ್ಕಿಲ್ಲ ಹೀಗಾಗಿ ಕನಿಷ್ಟ ಪಕ್ಷ ಜಿಲ್ಲಾಧಿಕಾರಿಗಳಾದರು ನಮ್ಮ ಭಾಗಕ್ಕೆ ಬೇಟಿ ನೀಡಿ ಜನರ ಮನವೊಲಿಸಲಿ ಎನ್ನುವುದು ಇವರ ಅಭಿಪ್ರಾಯವಾಗಿದೆ. ಬೆಳಿಗ್ಗೆಯಿಂದಲೂ ವಿವಿಧ ಪಕ್ಷದ ಮುಖಂಡರು ಇಲ್ಲಿನ ಜನರ ಮನ ಒಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಎಡಿಸಿ ಮೊಕ್ಕಾಂ
ಅಪರ ಡಿಸಿ ವಿದ್ಯಾಕುಮಾರಿ ಅವರು ಮೊಕ್ಕಾಂ ಹೂಡಿ, ಬೈಂದೂರು ಕ್ಷೇತ್ರದ ಮತದಾನ ಪ್ರಕ್ರಿಯೆ ಮೇಲೆ ನಿಗಾ ಇಟ್ಟಿದ್ದರು.