“ಮೈ ಭೀ ಚೌಕಿದಾರ್’ ಪ್ರಚಾರ ಅಭಿಯಾನ ತಂಡ ಪುತ್ತೂರಿಗೆ
Team Udayavani, Apr 12, 2019, 6:00 AM IST
ಉತ್ತರ ಭಾರತದ ಮೋದಿ ಅಭಿಮಾನಿಗಳ ತಂಡವನ್ನು ಪುತ್ತೂರಿನಲ್ಲಿ ಸ್ವಾಗತಿಸಲಾಯಿತು.
ನಗರ: ನರೇಂದ್ರ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿ ಯಾಗಬೇಕೆಂಬ ಉದ್ದೇಶದಿಂದ ಉತ್ತರ ಭಾರತದ ಯುವಕ – ಯುವತಿಯರ ತಂಡವೊಂದು ರಾಜಸ್ಥಾನದ ಚಿತ್ರನಟಿ ಸ್ನೇಹಾ ಸಿಂಗ್ ನೇತೃತ್ವದಲ್ಲಿ “ಮೈ ಭೀ ಚೌಕಿದಾರ್’ ಪ್ರಚಾರ ಅಭಿಯಾನವನ್ನು ದೇಶದಾದ್ಯಂತ ನಡೆಸುತ್ತಿದ್ದು, ಗುರುವಾರ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ತಂಡ ತಮ್ಮ 61ನೇ ದಿನದ ಪ್ರಚಾರ ಕಾರ್ಯವನ್ನು ನಡೆಸಿತು.
ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರನ್ನು ಗೆಲ್ಲಿಸುವಂತೆ ವಿವಿಧೆಡೆ ಪ್ರಚಾರ ಕಾರ್ಯ ನಡೆಸಿದರು. ನಗರದ ವಿವೇಕಾನಂದ ವಿದ್ಯಾಸಂಸ್ಥೆಗಳು, ಪುರುಷರಕಟ್ಟೆಯ ಮೇಘಾ ಇಂಡಸ್ಟ್ರೀಸ್ ಮೊದಲಾದ ಕಡೆಗಳಿಗೆ ತಂಡ ಭೇಟಿ ನೀಡಿ ಪ್ರಚಾರ ಅಭಿಯಾನ ನಡೆಸಿತು.
ತಂಡದ ಸದಸ್ಯರಾದ ಮಧ್ಯಪ್ರದೇಶದ ಸಮೀರ್ ಸಿಂಗ್, ಪಂಕಜ್ ಸಿಂಗ್, ಪ್ರಹ್ಲಾದ್ ಸಿಂಗ್, ಕೋಲ್ಕತ್ತಾದ ಸಂದೀಪ್ ಸರ್ದಾರ್, ಹಿಮಾಚಲ ಪ್ರದೇಶದ ಮನೀಷ್ ಕುಮಾರ್, ಪುತ್ತೂರಿನ ಬಿಜೆಪಿ ಮುಂದಾಳುಗಳಾದ ವಿದ್ಯಾ ಆರ್. ಗೌರಿ, ಜಯಂತಿ ನಾಯಕ್, ಅಜಿತ್ ಹೊಸಮನೆ, ದಿನೇಶ್ ಪುರುಷರಕಟ್ಟೆ, ಸುಭಾಸ್ ಮುಕ್ವೆ, ಗಣೇಶ್ ಮುಕ್ವೆ, ಪ್ರವೀಣ್ ನಾಯ್ಕ ಸೇರಾಜೆ, ನವೀನ್ ರೈ ಶಿಬರ, ಚಿದಂಬರ ನಾೖಕ್ ದರ್ಬೆ, ದೀಕ್ಷಿತ್ ಹಾರಾಡಿ, ದೇವಪ್ಪ ಗೌಡ ಕೆಮ್ಮಿಂಜೆ, ಶಶಾಂಕ್ ಬನ್ನೂರು, ಅಶೋಕ್ ಹಾರಾಡಿ, ಮಾಜಿ ಪುರಸಭಾಪತಿ ರಾಜೇಶ್ ಬನ್ನೂರು ಪಾಲ್ಗೊಂಡರು.
ಮೋದಿ ಪರ ವಾತಾವರಣ
ಚಿತ್ರನಟಿ ಸ್ನೇಹಾ ಸಿಂಗ್ ಮಾತನಾಡಿ, ಮೈ ಭೀ ಚೌಕಿದಾರ್ ಅಭಿಯಾನವನ್ನು ಎಲ್ಲರೂ ಸ್ವೀಕರಿಸಿದ್ದಾರೆ. ದೇಶದ ಗೌರವವನ್ನು ಎತ್ತರಕ್ಕೆ ಏರಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಈ ದೇಶದ ನವ ಮತದಾರರು ಮೋದಿ ಅವರನ್ನು ಬೆಂಬಲಿಸುವ ಮೂಲಕ ಬಲಿಷ್ಠ ಭಾರತದ ಕನಸನ್ನು ನನಸು ಮಾಡಲಿದ್ದಾರೆ. ದೇಶಾದ್ಯಂತ ನರೇಂದ್ರ ಮೋದಿ ಪರ ವಾತಾವರಣ ಕಂಡು ಬರುತ್ತಿದೆ ಎಂದು ಹೇಳಿದರು.