ಮೋದಿಯಿಂದಾಗಿ ದೇಶ ವಿಭಜನೆ
Team Udayavani, Apr 18, 2019, 6:00 AM IST
ಕೇರಳದ ವಯನಾಡ್ನ ತಿರುನೆಲ್ಲಿ ದೇಗುಲದಲ್ಲಿ ಬುಧವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ "ಬಲಿ ತರ್ಪಣಂ' ನೆರವೇರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ದೇಶವನ್ನು ವಿಭಜಿಸಿದ್ದು, ಜನರು ಪರಸ್ಪರ ಕಚ್ಚಾಡಿಕೊಳ್ಳುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೇರಳದಲ್ಲಿ ಬುಧವಾರ ಸಂಸದೀಯ ಸಮನ್ವಯ ಸಮಿತಿ ಸಭೆಯ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಅವರು, “ಮೋದಿಯವರ ನೀತಿಯಿಂದಾಗಿ ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆಗಳು ಹೆಚ್ಚಿವೆ. ಪ್ರತಿ 24 ಗಂಟೆಗೆ 27 ಸಾವಿರ ಯುವಜನತೆ ಉದ್ಯೋಗ ಕಳೆದುಕೊಳ್ಳುತ್ತಿರು ವಂಥ ಸ್ಥಿತಿ ಬಂದಿದೆ. ಇದಕ್ಕಿಂತ ದೊಡ್ಡ ದೇಶದ್ರೋಹ ಯಾವುದೂ ಇಲ್ಲ’ ಎಂದಿ ದ್ದಾರೆ. 2 ದಿನಗಳ ಕೇರಳ ಪ್ರವಾಸದಲ್ಲಿ ರುವ ರಾಹುಲ್, ವಯನಾಡ್ನಲ್ಲೂ ಬುಧವಾರ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಲ್ಲಿ ಮಾತನಾಡಿದ ಅವರು, “ನಾನು ವಯನಾಡ್ನ ಸಹೋದರಿಯರಿಗೆ ಸಹೋದರ, ಇಲ್ಲಿನ ತಾಯಂದಿರಿಗೆ ಮಗ. ನಾನು ನನ್ನ ಮನ್ ಕಿ ಬಾತ್ ಹೇಳಲು ಇಲ್ಲಿಗೆ ಬಂದಿಲ್ಲ. ಇಲ್ಲಿನ ಜನರು ಎದುರಿಸುತ್ತಿರುವಂಥ ಸಮಸ್ಯೆಗಳನ್ನು ಆಲಿಸಲು ಬಂದಿದ್ದೇನೆ. ಇಲ್ಲಿರುವ ರಾತ್ರಿ ಪ್ರಯಾಣ ನಿಷೇಧ, ಮಾನವ-ಪ್ರಾಣಿ ಸಂಘರ್ಷ, ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ. ನಾನು ಸುಳ್ಳು ಹೇಳುವುದಿಲ್ಲ’ ಎಂದಿದ್ದಾರೆ.
ಹುತಾತ್ಮರಿಗೆ ಬಲಿ ತರ್ಪಣಂ
ಇಲ್ಲಿನ ಪಾಪನಾಶಿನಿ ನದಿಯಲ್ಲಿ ಬಲಿತರ್ಪಣಂ ವಿಧಿವಿಧಾನವನ್ನು ನೆರವೇರಿ ಸಿದ ರಾಹುಲ್, ನಂತರ ತಿರುನೆಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಸುಮಾರು 3 ದಶಕಗಳ ಹಿಂದೆ ರಾಹುಲ್ ಅವರ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಚಿತಾಭಸ್ಮವನ್ನು ಇದೇ ನದಿಯಲ್ಲಿ ವಿಸರ್ಜಿ ಸಲಾಗಿತ್ತು. ಬುಧವಾರ ಇಲ್ಲಿ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮಾತ್ರ ವಲ್ಲದೆ, ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರಲ್ಲೂ ರಾಹುಲ್ಗಾಂಧಿ ಬಲಿತರ್ಪಣಂ ನೆರವೇರಿಸಿದ್ದಾರೆ. “ದಕ್ಷಿಣದ ಕಾಶಿ’ ಎಂದೇ ಕರೆಯಲಾಗುವ ತಿರುನೆಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾಹುಲ್ ಬರಿಗಾಲಲ್ಲೇ ಪಾಪನಾಶಿನಿ ತಟಕ್ಕೆ ತೆರಳಿದರು. ಇದಾದ ಬಳಿಕ, ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಾಜ್ಯ ದ ಮೊದಲ ಬುಡಕಟ್ಟು ಮಹಿಳೆ ಶ್ರೀಧನ್ಯಾ ಸುರೇಶ್ರನ್ನು ರಾಹುಲ್ ಭೇಟಿಯಾದರು.
ನಮೋ ಟಿವಿ ಚಾನೆಲ್ಗೆ ಷರತ್ತು
ಚುನಾವಣಾ ಕಾಯ್ದೆಯಲ್ಲಿ ಉಲ್ಲೇಖೀಸಲಾಗಿರುವಂತೆ, ಪ್ರತಿ ಹಂತದ ಮತದಾನ ಆರಂಭವಾಗುವ 48 ಗಂಟೆಗಳ ಮುನ್ನ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಪ್ರಸಾರ ಮಾಡಬಾರದು ಎಂದು ಬಿಜೆಪಿ ಪ್ರಾಯೋಜಿತ ನಮೋ ಟಿವಿ ಚಾನೆಲ್ಗೆ ಚುನಾವಣಾ ಆಯೋಗ ಸ್ಪಷ್ಟ ನಿರ್ದೇಶನ ನೀಡಿದೆ. ಇನ್ನು ಉಳಿದಿರುವ ಎಲ್ಲ 6 ಹಂತಗಳಲ್ಲೂ ಇದನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಇಂದು 2ನೇ ಹಂತದ ಮತದಾನ
11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಒಟ್ಟು 95 ಸೀಟುಗಳಿಗೆ ಗುರುವಾರ ಮತದಾನ ನಡೆಯಲಿದೆ. 2ನೇ ಹಂತದ ಈ ಮತದಾನದಲ್ಲಿ ಕೇಂದ್ರ ಸಚಿವರಾದ ಸದಾನಂದ ಗೌಡ, ಜುವಲ್ ಒರಾಂ, ಜಿತೇಂದ್ರ ಸಿಂಗ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿಎಂಕೆಯ ದಯಾನಿಧಿ ಮಾರನ್, ಎ.ರಾಜಾ, ಕನಿಮೋಳಿ ಸೇರಿದಂತೆ ಸುಮಾರು 1,600 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಬಾಂಗ್ಲಾ ನಟನ ವಿರುದ್ಧ ದೂರು
ಪ.ಬಂಗಾಲದಲ್ಲಿ ಟಿಎಂಸಿ ಅಭ್ಯರ್ಥಿ ಸುಗತಾ ರಾಯ್ ಪರ ಪ್ರಚಾರಕ್ಕೆ ಬಂದ ಬಾಂಗ್ಲಾದೇಶದ ನಟ ಗಾಜಿ ನೂರ್ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಇದು ವೀಸಾದ ಷರತ್ತಿನ ಸಂಪೂರ್ಣ ಉಲ್ಲಂಘನೆಯಾಗಿದ್ದು, ವಿದೇಶಿಯೊಬ್ಬರು ಭಾರತದ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರುವ ಯತ್ನವೂ ಹೌದು. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ವಕೀಲರನ್ನೇ ವಜಾ ಮಾಡಿದ ಸರಕಾರ
ಸುಪ್ರೀಂ ಕೋರ್ಟ್ನಲ್ಲಿ ತಮ್ಮ ಪರ ವಕೀಲರಾಗಿದ್ದ ರುಚಿ ಕೊಹ್ಲಿ ಎಂಬವರನ್ನು ರಾಜಸ್ಥಾನ ಸರಕಾರ ಏಕಾಏಕಿ ವಜಾ ಮಾಡಿದೆ. ಇತ್ತೀಚೆಗೆ ರಫೇಲ್ಗೆ ಸಂಬಂಧಿಸಿ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವಾಗ ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಪರ ರುಚಿ ಕೊಹ್ಲಿ ಅವರೇ ವಕಾಲತ್ತು ವಹಿಸಿದ್ದರು.