“ವಿಮಾನ ನಿಲ್ದಾಣ ಖಾಸಗೀಕರಣ; ಅಂತಿಮ ನಿರ್ಧಾರವಾಗಿಲ್ಲ’
Team Udayavani, Apr 16, 2019, 6:24 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಖಾಸಗೀ ಕರಣ ಕುರಿತು ಅಂತಿಮ ನಿರ್ಧಾರವಾಗಿಲ್ಲ ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಈ ಕುರಿತು ಸರಕಾರ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು. ದೇಶದಲ್ಲಿ ವಿಮಾನಯಾನ ಸೌಲಭ್ಯ ಉನ್ನತೀಕರಣಕ್ಕೆ ನಮ್ಮ ಸರಕಾರ ವಿಶೇಷ ಒತ್ತು ನೀಡಿದೆ. ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 200ಕ್ಕೇರಿಸುವ ಗುರಿ ಇದೆ. ಆಂತರಿಕ ವಿಮಾನಯಾನ ಸೌಲಭ್ಯ ಹೆಚ್ಚಳಕ್ಕೆ ಜಾರಿಗೆ ತಂದಿರುವ ಉಡಾನ್ ಯೋಜನೆಯಲ್ಲಿ ಕರ್ನಾಟಕಕ್ಕೂ ಹೆಚ್ಚಿನ ಪ್ರಯೋಜನವಾಗಿದೆ ಎಂದರು.
ಪ್ರಧಾನಿ ಮೋದಿ ನೇತೃತ್ವದ 5 ವರ್ಷಗಳ ಆಡಳಿತದಲ್ಲಿ ದೇಶ ಅಭೂತಪೂರ್ವ ಅಭಿವೃದ್ಧಿ ಕಂಡಿದೆ. ಈ ಅಭಿವೃದ್ಧಿಪರ್ವ ಮುಂದುವರಿಯಬೇಕಾದರೆ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದರು.
ನಳಿನ್ ಸಾಧನೆ ಅತ್ಯುತ್ತಮ
ಮಂಗಳೂರಿನಲ್ಲಿ ಪ್ರಧಾನಿ ಮೋದಿ ಚುನಾವಣ ಪ್ರಚಾರ ರ್ಯಾಲಿ ಅಭೂತಪೂರ್ವ ವಾಗಿ ನಡೆದಿದೆ. ಜನತೆ ಮೋದಿ ಸಾಧನೆಗಳನ್ನು ಮೆಚ್ಚಿದ್ದಾರೆ. ಈ ಬಾರಿಯೂ ಅವರನ್ನು ಬೆಂಬಲಿಸಲಿದ್ದಾರೆ ಎಂದ ಸುರೇಶ್ ಪ್ರಭು, ದಕ್ಷಿಣ ಕನ್ನಡದ ಸಂಸದನಾಗಿ ನಳಿನ್ ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ. ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದ ಅನುದಾನಗಳನ್ನು ತಂದು ಅನೇಕ ಅಭಿವೃದ್ದಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.
ಅವರನ್ನು ಈ ಬಾರಿಯೂ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ನಳಿನ್ ಸಂಸದನಾಗಿ ಮುಂದಿನ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ರಾಜ್ಯದ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದರು.