ಇದು ಫೇರ್ ಆ್ಯಂಡ್ ಫ್ರೀ ಚುನಾವಣೆ ಅಲ್ಲ: ದಿನೇಶ್
Team Udayavani, Apr 12, 2019, 6:25 AM IST
ಬೆಳಗಾವಿ: ಸೋಲುವ ಭೀತಿಯಿಂದ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಚುನಾವಣೆ ವೇಳೆ ದಾಳಿ ನಡೆಸುತ್ತಿದೆ. ಇದು ಫೇರ್ ಆ್ಯಂಡ್ ಫ್ರೀ ಚುನಾವಣೆ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಬಿಜೆಪಿಯವರು ಸತ್ಯ ಹರಿಶ್ಚಂದ್ರರೇ, ಐಟಿ ಇಲಾಖೆ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ನವರ ಮೇಲೆ ಏಕೆ ದಾಳಿ ನಡೆಸುತ್ತಿದ್ದಾರೆ. ದೇಶದಲ್ಲಿ ಮೋದಿ,ಶಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ.
ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಸಭೆ ನಡೆಸಲಾಗುವುದು ಎಂದರು. ಕೆಲ ಮಾಧ್ಯಮಗಳು ಮೋದಿ ಹಾಗೂ ಬಿಜೆಪಿಯನ್ನು ಹೊಗಳುವುದರಲ್ಲಿ ನಿರತವಾಗಿವೆ.
ಬೆಂಗಳೂರಿನಲ್ಲಿ ತೇಜಸ್ವಿನಿ ಅನಂತಕುಮಾರ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ, ಉದಾಸಿ ಮಕ್ಕಳ ಡಿಎನ್ಎ ಪರೀಕ್ಷೆ ಮಾಡದೇ ಏಕೆ ಟಿಕೆಟ್ ನೀಡಲಾಗಿದೆ ಎಂದು ಕುಟುಕಿದರು. ಮಾಜಿ ಸಚಿವ ರಮೇಶಜಾರಕಿಹೊಳಿ ವಿಷಯಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಸಂಪರ್ಕದಲ್ಲಿಲ್ಲ. ಯಾರ ಪರ ಕೆಲಸ ಮಾಡುತ್ತಾರೆಂಬ ಬಗ್ಗೆ ಚುನಾವಣೆ ಬಳಿಕ ತಿಳಿಯಲಿದೆ ಎಂದರು.