ಹಣ ಪಡೆದು ಉಮೇಶ್ ಜಾಧವ್ ರಾಜೀನಾಮೆ
Team Udayavani, Mar 5, 2019, 1:10 AM IST
ದಾವಣಗೆರೆ: “ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಬಿಜೆಪಿಗೆ ಸೇರುವ ವಿಚಾರ ಮೊದಲೇ ಫಿಕ್ಸ್ ಆಗಿತ್ತು. ಆತ ಮುಂಚಿತವಾಗಿಯೇ ಹಣ ಪಡೆದಿದ್ದ.
ಅದಕ್ಕಾಗಿಯೇ ರಾಜೀನಾಮೆ ನೀಡಿದ್ದಾನೆ’ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸೋಮವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, ಜಾಧವ್ ರಾಜೀನಾಮೆಯಿಂದ ಏನೂ ತೊಂದರೆ ಆಗದು ಎಂದರು.
ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್-ಜೆಡಿಎಸ್ ನಡುವೆ ಟಿಕೆಟ್ ಗೊಂದಲ ಶೀಘ್ರವೇ ಬಗೆಹರಿಯಲಿದೆ. ದಾವಣಗೆರೆ ಕ್ಷೇತ್ರಕ್ಕೆ ಜೆಡಿಎಸ್ನವರಿಗೆ ಟಿಕೆಟ್ ಸಿಗಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು.
ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳು ಹಾಗೆಸುಮ್ಮನೆ ಹೇಳುತ್ತಾರೆ. ಟಿಕೆಟ್ ಸಿಕ್ಕರೆ ಸ್ಪರ್ಧೆ ಮಾಡುತ್ತಾರೆ.
ಇದಕ್ಕೇನೂ ಕೊನೆ ಇಲ್ಲ.
ಸಂಸದ ಜಿ.ಎಂ. ಸಿದ್ದೇಶ್ವರ್ ಸಹ ಇದು ಕೊನೆ ಚುನಾವಣೆ ಅಂತ ಹೇಳಿದ್ದಾನೆ. ಆದರೆ,ಜನರೇ ಆತನನ್ನು ಮನೆಗೆ ಕಳುಹಿಸುತ್ತಾರೆ. ಶೀಘ್ರವೇ ಚುನಾವಣೆ ಘೋಷಣೆಯಾಗಲಿದ್ದು,ಬಳಿಕ ದಾವಣಗೆರೆ ಟಿಕೆಟ್ ಪ್ರಕಟಿಸಲಾಗುವುದು ಎಂದು ಹೇಳಿದರು.